ಬೆಂಗಳೂರು: ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ 13 ದಿನಗಳಿಂದ ಮುಚ್ಚಿದ್ದ ಮಾರತ್ಹಳ್ಳಿಯ ವಿಬ್ಗಯೊರ್ ಶಾಲೆಯು ಸೋಮವಾರ ಪುನರಾರಂಭವಾಯಿತು.
ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಇತರೆ ಮಕ್ಕಳ ಪೋಷಕರಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಶಾಲೆಯನ್ನು ಮುಚ್ಚಲಾಗಿತ್ತು.
ಐದರಿಂದ 10ನೇ ತರಗತಿಗಳು ಸೋಮವಾರದಿಂದ ಆರಂಭವಾದವು. ಒಂದರಿಂದ ನಾಲ್ಕನೇ ತರಗತಿಗಳು ಜುಲೈ 30ರಿಂದ ಆರಂಭವಾಗಲಿದ್ದು, ಪ್ರಿ ನರ್ಸರಿ ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಲಿವೆ.
ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಮತ್ತು ಶಿಕ್ಷಣ ಇಲಾಖೆಯು ವಿಬ್ಗಯೊರ್ ಶಾಲೆಗೆ ವಿಶೇಷ ಮಾರ್ಗಸೂಚಿ ರೂಪಿಸಲಾಗಿತ್ತು. ಪೋಷಕರ 11 ಬೇಡಿಕೆಗಳ ಸಂಬಂಧ ಶಾಲಾ ಆಡಳಿತ ಮಂಡಳಿಯು ಜುಲೈ 25ರಂದು ಸಭೆ ನಡೆಸಿ ಅವುಗಳನ್ನು ಈಡೇರಿಸುವ ಭರವಸೆ ಕೊಟ್ಟಿತ್ತು.
ಐದರಿಂದ 10ನೇ ತರಗತಿವರೆಗಿನ ಶೇ 70ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಶಾಲೆಗೆ ಬಂದಿದ್ದ ಪೋಷಕರಲ್ಲಿ ಮಕ್ಕಳ ಸುರಕ್ಷತೆ ಬಗೆಗಿನ ಆತಂಕ ಇನ್ನೂ ದೂರವಾದಂತೆ ಕಾಣಲಿಲ್ಲ. ಶಾಲೆಯ ಸುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ವರ್ತೂರು ಪೊಲೀಸರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಶಾಲಾ ಆವರಣದಲ್ಲಿ 100ಕ್ಕೂ ಹೆಚ್ಚಿನ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದುವರಿದ ಪೋಷಕರ ಆತಂಕ: ಮಕ್ಕಳ ಸುರಕ್ಷತೆಗಾಗಿ ಆಡಳಿತ ಮಂಡಳಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಶಿಕ್ಷಕರನ್ನು ಬದಲಿಸದೇ ಇರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಪೋಷಕರೊಬ್ಬರು, ‘ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದರೂ ಅದನ್ನು ಮುಚ್ಚಿಟ್ಟ ಶಾಲಾ ಸಿಬ್ಬಂದಿ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಶಾಲೆ ಬಗ್ಗೆ ನನಗೆ ಗೌರವವಿದೆ. ಆದ್ದರಿಂದ ಮಗುವನ್ನು ಮತ್ತೆ ಶಾಲೆಗೆ ಕಳಿಸುತ್ತಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳಿಗೂ ಶಿಕ್ಷೆಯಾಗಬೇಕು’ ಎಂದರು.
‘ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸಲು ಶಾಲಾ ಆಡಳಿತ ಮಂಡಳಿ ವಿಫಲವಾಗಿದೆ. ಆದ್ದರಿಂದ ಮಗುವನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ. ರೂ.1 ಲಕ್ಷ ಡೊನೆಷನ್ ಕೊಟ್ಟು ವಿಬ್ಗಯೊರ್ ಶಾಲೆಗೆ ಮಗುವನ್ನು ಸೇರಿಸಿದ್ದೆ. ಆಡಳಿತ ಮಂಡಳಿ ಆ ಹಣವನ್ನು ಹಿಂದಿರುಗಿಸುವ ಬಗ್ಗೆ ಅನುಮಾನವಿದೆ. ಈಗ ರೂ. 80 ಸಾವಿರ ಡೊನೆಷನ್ ಕೊಟ್ಟು ವರ್ತೂರಿನ ಕ್ರಿಸಾಲಿಸ್ ಶಾಲೆಗೆ ಮಗುವನ್ನು ಸೇರಿಸಿದ್ದೇನೆ’ ಎಂದು ಮತ್ತೊಬ್ಬ ಪೋಷಕರು ಹೇಳಿದರು.
‘ಶಾಲಾ ಆವರಣದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವುದರಿಂದ ಮಕ್ಕಳ ಸುರಕ್ಷತೆ ಸಾಧ್ಯವಿಲ್ಲ. ಮಕ್ಕಳನ್ನು ಪೋಷಕರಂತೆ ನೋಡಿಕೊಳ್ಳಬೇಕಾಗಿದ್ದ ಶಾಲೆಯ ಸಿಬ್ಬಂದಿ ಆ ರೀತಿ ನಡೆದುಕೊಂಡಿಲ್ಲ’ ಎಂದರು. ‘ಮಗಳು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅದೇ ಪ್ರಾಂಶುಪಾಲರು, ಶಿಕ್ಷಕರು ಶಾಲೆಯಲ್ಲಿದ್ದಾರೆ. ಆದ್ದರಿಂದ ಮಗಳನ್ನು ವೈಟ್ಫೀಲ್ಡ್ನ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ ಅಥವಾ ವರ್ತೂರಿನ ಕ್ರಿಸಾಲಿಸ್ ಶಾಲೆಗೆ ಸೇರಿಸುತ್ತೇನೆ’ ಎಂದು ಹೇಳಿದರು.
ಶಾಲೆಗೆ ಶಿಕ್ಷಣಾಧಿಕಾರಿಗಳ ಭೇಟಿ
ವಲಯ ಶಿಕ್ಷಣಾಧಿಕಾರಿ (ಬಿಇಒ) ಎಸ್.ಎಂ.ರಮೇಶ್ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ‘ಶಾಲೆಯ 574 ವಿದ್ಯಾರ್ಥಿಗಳಲ್ಲಿ 404 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಐದನೇ ತರಗತಿಯಲ್ಲಿ ಕಡಿಮೆ ವಿದ್ಯಾರ್ಥಿಗಳು ಬಂದಿದ್ದಾರೆ’ ಎಂದು ಹೇಳಿದರು.
‘ಐದನೇ ತರಗತಿಯಲ್ಲಿ 209 ವಿದ್ಯಾರ್ಥಿಗಳಿದ್ದು ಅವರಲ್ಲಿ 128, ಆರನೇ ತರಗತಿಯ 133 ವಿದ್ಯಾರ್ಥಿಗಳಲ್ಲಿ 98, ಏಳನೇ ತರಗತಿಯ 92 ವಿದ್ಯಾರ್ಥಿಗಳಲ್ಲಿ 62, ಎಂಟನೇ ತರಗತಿಯ 65 ವಿದ್ಯಾರ್ಥಿಗಳಲ್ಲಿ 53, ಒಂಬತ್ತನೇ ತರಗತಿಯ 32 ವಿದ್ಯಾರ್ಥಿಗಳಲ್ಲಿ 30, ಹತ್ತನೇ ತರಗತಿಯ 43 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಶಾಲೆಯ 422 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ 366 ಮಂದಿ ಬಂದಿದ್ದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.