ADVERTISEMENT

‘ಸತ್ವಯುತ ಬರವಣಿಗೆ ಮರೆಯಾಗಿದೆ’

ಪ್ರೇಮಾ ಭಟ್‌ ಅವರಿಗೆ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 19:49 IST
Last Updated 1 ಮಾರ್ಚ್ 2017, 19:49 IST
ಹಿರಿಯ ನಟಿ ಬಿ. ಸರೋಜಾದೇವಿ ಅವರು ಲೇಖಕಿ ಪ್ರೇಮಾಭಟ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಅಧ್ಯಕ್ಷ ಮನು ಬಳಿಗಾರ್‌, ಲೇಖಕಿ ಎ. ಪಂಕಜ ಇದ್ದರು  –ಪ್ರಜಾವಾಣಿ ಚಿತ್ರ
ಹಿರಿಯ ನಟಿ ಬಿ. ಸರೋಜಾದೇವಿ ಅವರು ಲೇಖಕಿ ಪ್ರೇಮಾಭಟ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಅಧ್ಯಕ್ಷ ಮನು ಬಳಿಗಾರ್‌, ಲೇಖಕಿ ಎ. ಪಂಕಜ ಇದ್ದರು –ಪ್ರಜಾವಾಣಿ ಚಿತ್ರ   
ಬೆಂಗಳೂರು: ‘ಪುಸ್ತಕ ಬರೆಯುವವರ ಸಂಖ್ಯೆ ಆಗ ಕಡಿಮೆ ಇತ್ತು. ಸತ್ವಯುತಬರವಣಿಗೆ ಕಾಣಸಿಗುತ್ತಿತ್ತು. ಆದರೆ, ಈಗ ಬರೆಯುವವರು ಹೆಚ್ಚಿದ್ದಾರೆ, ಸತ್ವವೇ ಇಲ್ಲ’ ಎಂದು ಲೇಖಕಿ ಪ್ರೇಮಾ ಭಟ್‌ ಅಭಿಪ್ರಾಯಪಟ್ಟರು.
 
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ‘ನಮ್ಮ ಕಾಲದಲ್ಲಿ ಲೇಖಕಿಯರು ಹೆಚ್ಚು ಬರೆದರೆ, ಪುಸ್ತಕದಲ್ಲಿರುವ ಹೂರಣದ ಬಗ್ಗೆ ತಿಳಿದುಕೊಳ್ಳದೆಯೇ ಚರ್ವಿತಚರ್ವಣ ಎಂದು ತೀರ್ಮಾನಿಸಿ ಮೂಲೆಗುಂಪು ಮಾಡುತ್ತಿದ್ದರು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ನನ್ನ ಅನುಭವಗಳನ್ನು ದಾಖಲಿಸಿದ್ದೇನೆ’ ಎಂದು ಹೇಳಿದರು.
 
‘ನಾನು ಸರ್ಕಾರಿ ಕೆಲಸದಲ್ಲಿದ್ದಾಗ ಭ್ರಷ್ಟಾಚಾರದ ಅನೇಕ ಮುಖಗಳನ್ನು ನೋಡಿದ್ದೇನೆ. ಅದನ್ನೇ ಆಧರಿಸಿ  ತಿಮಿಂಗಿಲ, ಹಾವು, ಹುತ್ತ ಕಥೆಗಳನ್ನು ಬರೆದೆ. ಹೀಗೆ ನನ್ನ ಅನುಭವಗಳೇ ಕಥೆಗಳಾಗಿ ರೂಪಗೊಂಡಿವೆ’ ಎಂದರು.
 
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ‘ಸರೋಜಾದೇವಿ ಅವರ ಮಗಳ ಸ್ಮರಣಾರ್ಥ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲೇಖಕಿಯರನ್ನು ಗುರುತಿಸಿ ‘ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ’ ನೀಡಲಾಗುತ್ತದೆ. ಪ್ರಾರಂಭದಲ್ಲಿ ಇಟ್ಟಿದ್ದ ₹1 ಲಕ್ಷ ದತ್ತಿ ನಿಧಿಯನ್ನು ಈಗ ₹3.5 ಲಕ್ಷಕ್ಕೆ ಏರಿಸಿದ್ದಾರೆ’ ಎಂದು ಹೇಳಿದರು. ಹಿರಿಯ ನಟಿ ಬಿ. ಸರೋಜಾದೇವಿ, ಲೇಖಕಿ ಎ. ಪಂಕಜ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.