ಬೆಂಗಳೂರು: ನಗರದಲ್ಲಿ ಏಪ್ರಿಲ್ 28ರಿಂದ 30ರವೆಗೆ ನಡೆಯಲಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳ–2017ರ ಅಂಗವಾಗಿ ಕೃಷಿ ಇಲಾಖೆ ಭಾನುವಾರ ಕಬ್ಬನ್ ಉದ್ಯಾನದಲ್ಲಿ 5 ಕಿ.ಮೀ ‘ಸಿರಿಧಾನ್ಯಗಳ ಮ್ಯಾರಥಾನ್’ ಹಮ್ಮಿಕೊಂಡಿತ್ತು.
ಸಾವಯವ ಆಹಾರ ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಈ ಮ್ಯಾರಥಾನ್ನಲ್ಲಿ ಸುಮಾರು 2,000 ಮಂದಿ ಭಾಗವಹಿಸಿದ್ದರು. ಕಬ್ಬನ್ ಪಾರ್ಕ್ನ ಬ್ಯಾಂಡ್ ಸ್ಟ್ಯಾಂಡ್ನಿಂದ ಪ್ರಾರಂಭವಾದ ಓಟ ಬಾಲಭವನ, ಪ್ರೆಸ್ಕ್ಲಬ್, ವಿಧಾನಸೌಧದ ಎದುರಿನಿಂದ ಸಾಗಿ ಮತ್ತೆ ಬ್ಯಾಂಡ್ ಸ್ಟ್ಯಾಂಡ್ಗೆ ಬಂದು ಸೇರುವ ಮೂಲಕ ಮುಕ್ತಾಯವಾಯಿತು.
ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಸಾವಯವ ಆಹಾರ ಹಾಗೂ ಸಿರಿಧಾನ್ಯಗಳ ಜಾಗೃತಿ ಮೂಡಿಸಲು ಸಾವಿರಾರು ಸಂಖ್ಯೆಯಲ್ಲಿ ನಗರದ ಜನರು ಭಾಗವಹಿಸಿರುವುದು ಸಂತಸದ ವಿಷಯ’ ಎಂದರು.
‘ಸಿರಿಧಾನ್ಯಗಳನ್ನು ಅತ್ಯುತ್ತಮ ಆಹಾರ ಎಂದೇ ಪರಿಗಣಿಸಲಾಗಿದೆ. ಮಳೆ ಕೊರತೆ ಇರುವ ರಾಜ್ಯಗಳಲ್ಲಿ ಸಿರಿಧಾನ್ಯ ಬೆಳೆಗಳು ಅತ್ಯುತ್ತಮ ಆಯ್ಕೆ. ಇವುಗಳನ್ನು ಬೆಳೆಯಲು ಭತ್ತ ಬೆಳೆಯಲು ಬೇಕಾಗುವ ನೀರಿನ ಪ್ರಮಾಣಕ್ಕಿಂತ ಶೇ 70ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಕೀಟನಾಶಕಗಳ ಅವಶ್ಯಕತೆ ಇಲ್ಲ. ಕನಿಷ್ಠ ಫಲವತ್ತತೆಯ ಭೂಮಿಯಲ್ಲಿ ಅಲ್ಪ ವೆಚ್ಚದಲ್ಲಿ ಇದನ್ನು ಉತ್ಪಾದಿಸಬಹುದು. ಇದನ್ನು ಬೆಳೆಯಲು ರೈತರು ಮನಸ್ಸು ಮಾಡಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ : ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಕೃಷಿ, ತೋಟಗಾರಿಕೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆಯಬಹುದು. ಸಾವಯವ ಉತ್ಪನ್ನ ಮತ್ತು ಸಿರಿಧಾನ್ಯಗಳನ್ನು ಬೆಳೆಯುವ ರೈತರು, ಖರೀದಿದಾರರು, ಮಾರಾಟಗಾರರು ಮತ್ತು ರಫ್ತುಗಾರರಿಗೆ ಈ ಮೇಳ ಒಂದೇ ವೇದಿಕೆಯಲ್ಲಿ ಸೇರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.