ADVERTISEMENT

ಸುಕೃತ ಕೃಷಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2013, 19:59 IST
Last Updated 31 ಡಿಸೆಂಬರ್ 2013, 19:59 IST

ಬೆಂಗಳೂರು: ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕು­ಗಳಲ್ಲಿ ಒಂದಾದ ಸುಕೊ ಬ್ಯಾಂಕ್‌ ಮೊದಲ ಬಾರಿಗೆ ರಾಜ್ಯ­ಮಟ್ಟದ ಸುಕೃತ ಕೃಷಿ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.

ಕೃಷಿ ಕ್ಷೇತ್ರದಲ್ಲಿ ಗುಣಾತ್ಮಕವಾದ ಬದಲಾವಣೆ ತರುವ ಆಶಯದೊಂದಿಗೆ ಈ ಕ್ಷೇತ್ರದಲ್ಲಿನ ಸಾಧಕ­ರನ್ನು ಗುರುತಿಸಿ ಉತ್ತೇಜನ ನೀಡುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುವುದು ಎಂದು ಸುಕೊ ಬ್ಯಾಂಕ್‌ ಅಧ್ಯಕ್ಷ ಮನೋಹರ ಮಸ್ಕಿ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡ ಮಂಗಳವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಸಾಧಕರಿಗೆ ಸುಕೃತ ಕೃಷಿ ಪ್ರಶಸ್ತಿ, ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿ ಹಾಗೂ ಕೃಷಿ ಮಾಧ್ಯಮ ಸಂಶೋಧನೆಗೆ ಸುಕೃತ ಕೃಷಿ ಮಾಧ್ಯಮ ಫೆಲೋಶಿಪ್ ನೀಡಲಾಗುತ್ತದೆ. ಈ ಪ್ರಶಸ್ತಿಗಳು ತಲಾ ಒಂದು ಲಕ್ಷ ನಗದು ಒಳಗೊಂಡಿದೆ.
ಸರ್ಕಾರೇತರ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡು­ವುದು ಇನ್ನಷ್ಟು ಹೆಚ್ಚಾಗಬೇಕು. ಇದರಿಂದ ಕೃಷಿಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೃಷ್ಣಬೈರೇ­ಗೌಡ ತಿಳಿಸಿದರು.

ಈಗಾಗಲೇ 350ಕ್ಕೂ ಹೆಚ್ಚು ಸಾಧಕರನ್ನು ಗುರು­ತಿಸ­ಲಾಗಿದೆ. ಅರ್ಜಿ ಸಲ್ಲಿಸದವರನ್ನೂ ಪರಿಗಣಿಸಲಾ­ಗು­ತ್ತದೆ. ಅರ್ಹರನ್ನು ಆಯ್ಕೆ ಮಾಡಲು ಸುಕೊ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ರಚಿಸ­ಲಾಗಿದೆ ಎಂದು ಸಮಿತಿ ಸಂಚಾಲಕ ಶಿವಾನಂದ ಕಳವೆ ಹೇಳಿದರು.

ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: ಶಿವಾ­ನಂದ ಕಳವೆ, ಮೊಬೈಲ್‌ ಸಂಖ್ಯೆ: 9449796014, 9448023715
ಕ್ಯಾಲೆಂಡರ್‌ ಬಿಡುಗಡೆ: ಸುಕೊ ಬ್ಯಾಂಕ್‌ ಹೊರ­ತಂದಿರುವ ಕ್ಯಾಲೆಂಡರ್‌ ಅನ್ನು ಸಚಿವ ಕೃಷ್ಣಬೈರೇಗೌಡ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.