ADVERTISEMENT

ಸೈಬರ್‌ ಯುದ್ಧದ ಆತಂಕದಲ್ಲಿ ಜಗತ್ತು

ಹ್ಯಾಕರ್‌ಗಳು ಭಯೋತ್ಪಾದಕರು: ಫ್ಲಾರಿಡಾ ವಿವಿ ಪ್ರಾಧ್ಯಾಪಕ ಅಯ್ಯಂಗಾರ್‌ ಆತಂಕ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST
‘ಬೆಂಗಳೂರು ವಿಜ್ಞಾನ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸೈಬರ್‌ ಭದ್ರತೆ ಸುರಕ್ಷಿತವೇ?’ ಎಂಬ ವಿಷಯದ ಕುರಿತು ಫ್ಲಾರಿಡಾ ಅಂತರರಾಷ್ಟ್ರೀಯ ವಿ.ವಿ ಪ್ರಾಧ್ಯಾಪಕ ಡಾ. ಎಸ್‌.ಸೀತಾರಾಮ್‌ ಅಯ್ಯಂಗಾರ್‌ ಮಾತನಾಡಿದರು
‘ಬೆಂಗಳೂರು ವಿಜ್ಞಾನ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸೈಬರ್‌ ಭದ್ರತೆ ಸುರಕ್ಷಿತವೇ?’ ಎಂಬ ವಿಷಯದ ಕುರಿತು ಫ್ಲಾರಿಡಾ ಅಂತರರಾಷ್ಟ್ರೀಯ ವಿ.ವಿ ಪ್ರಾಧ್ಯಾಪಕ ಡಾ. ಎಸ್‌.ಸೀತಾರಾಮ್‌ ಅಯ್ಯಂಗಾರ್‌ ಮಾತನಾಡಿದರು   

ಬೆಂಗಳೂರು: ‘ಎರಡು ವಿಮಾನ­ಗಳು ಕೆಳಗಿಳಿಯಲು ಸಿದ್ಧ­ವಾಗಿವೆ ಎಂದಿಟ್ಟು­ಕೊಳ್ಳಿ. ನಿಲ್ದಾಣ­ದಲ್ಲಿ ವಿಮಾನದ ಮಾರ್ಗವನ್ನು ನಿಯಂತ್ರಿ­ಸುವ ಅಧಿಕಾರಿ­ಗಳನ್ನೇ ತಮ್ಮ ಚಾಕಚಕ್ಯತೆ ಮೂಲಕ ಗೊಂದ­ಲಕ್ಕೆ ಒಳಪಡಿಸಿ ಅಪಘಾತಕ್ಕೆ ಕಾರಣವಾಗುವ ಸೈಬರ್‌ ವಂಚಕರು (ಹ್ಯಾಕರ್ಸ್‌) ಈ ಜಗತ್ತಿನಲ್ಲಿದ್ದಾರೆ. ಇದರಿಂದ ಭಾರಿ ಸಾವು ನೋವು ಸಂಭವಿ­ಸುವ ಸಾಧ್ಯತೆ ಇರುತ್ತದೆ’

‘ಭಾರತದ ಒಂದು ಭಾಗ­ವನ್ನು ಪಾಕಿಸ್ತಾನದ ಸೇನೆ ಆಕ್ರಮಿ­ಸಿಕೊಂಡಿದೆ ಎಂದು ಎಲ್ಲರಿಗೆ ಇಮೇಲ್‌ ಬರು­ತ್ತದೆ ಎಂದಿಟ್ಟು­ಕೊಳ್ಳಿ. ಆಗ ಜನ ದಂಗೆ ಏಳ­ಬಹುದು. ನಂತರದ ಪರಿಣಾ­ಮ­­ವನ್ನು ನೀವೇ ಊಹಿಸಿ’
–ಈ ರೀತಿಯ ಉದಾಹ­ರಣೆ ಮೂಲಕ ಸೈಬರ್‌ ಅಪರಾ­ಧದ ಕರಾಳ ಮುಖ­ವನ್ನು ತೆರೆದಿಟ್ಟಿದ್ದು ಫ್ಲಾರಿಡಾ ಅಂತರರಾಷ್ಟ್ರೀಯ ವಿ.ವಿ ಪ್ರಾಧ್ಯಾಪಕ ಡಾ. ಎಸ್‌.­ಸೀತಾರಾಮ್‌ ಅಯ್ಯಂಗಾರ್‌.

‘ಬೆಂಗಳೂರು ವಿಜ್ಞಾನ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿ­ಸಿದ್ದ ‘ಸೈಬರ್‌ ಭದ್ರತೆ ಸುರಕ್ಷಿತವೇ?’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಸೈಬರ್‌ ಅಪರಾಧ ಈಗ ಸೈಬರ್‌ ಯುದ್ಧಕ್ಕೆ ಕಾರಣ­­ವಾ­ಗುವ ಆತಂಕ ಸೃಷ್ಟಿಸಿದೆ. ಇನ್ನು ದೇಶಗಳ ನಡುವೆ ಸಾಂಪ್ರ­ದಾ­ಯಿಕ ಯುದ್ಧ ನಡೆಯುವು­ದಿಲ್ಲ. ಬದಲಾಗಿ ಸೈಬರ್‌ ಯುದ್ಧ ಜರುಗುವ ಸಾಧ್ಯತೆಗಳಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಜ್ಞಾನಿಗಳು, ಪ್ರೊಫೆಸರ್‌­ಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಆತಂಕಭರಿತ ಧ್ವನಿಯಲ್ಲಿಯೇ ಪ್ರಶ್ನೆಗಳ ಮೂಲಕ ತಮ್ಮ ಅನುಮಾನ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿ­ದರು. ಪವರ್‌ ಪಾಯಿಂಟ್‌ ನೆರವಿನಿಂದ ಅವರು ಉದಾಹರ­ಣೆ­, ಚಿತ್ರ ಹಾಗೂ ಗ್ರಾಫಿಕ್ಸ್‌ ಮೂಲಕ ಅಯ್ಯಂಗಾರ್‌, ತಮ್ಮ ಅನುಭವದ ಬುತ್ತಿಯನ್ನು ಸಭಿಕರಿಗೆ ಉಣಬಡಿಸಿದರು.

ವೆಬ್‌ ಪೇಜ್‌ಗೇ ಕನ್ನ: ‘ನಾನು ಇತ್ತೀಚೆಗಷ್ಟೇ ‘ಮ್ಯಾಥಮೆಟಿಕ್ಸ್‌ ಥಿಯರಿ’ ಎಂಬ ಪುಸ್ತಕ ಬರೆದಿದ್ದೇನೆ. ಅದು ವೆಬ್‌ಪೇಜ್‌ನಲ್ಲೂ ಲಭ್ಯ­ವಿದೆ. ಆದರೆ ಈ ವಂಚ­ಕರು ಆ ವೆಬ್‌ಪೇಜ್‌ಗೆ ಕನ್ನ ಹಾಕಿ ಪುಸ್ತಕ ಬರೆದವರ ಹೆಸರನ್ನೇ ಬದಲಾಯಿಸಿದ್ದಾರೆ’ ಎಂದಾಗ ಸಭಾಂಗಣ­ದಲ್ಲಿ ಜೋರು ನಗು.

‘ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಹಣಕಾಸು ವ್ಯವಹಾರ­ದಲ್ಲಿ ತೊಡಗಿರುವವರು ಈ ಸೈಬರ್‌ ಕಳ್ಳರ ವಂಚನೆಗೆ ಒಳಗಾಗುತ್ತಿ­ದ್ದಾರೆ. ಕೋಟ್ಯಂತರ ಹಣ ಕಳೆದುಕೊಂಡ ಉದಾಹರಣೆ­ಗಳಿವೆ. ಷೇರುಪೇಟೆಯ ಕೆಲ ಮಾಹಿತಿಯನ್ನು ಮೊದಲೇ ಕಲೆಹಾಕಿ ಮಾರುಕಟ್ಟೆಯ ಏರುಪೇರಿಗೆ ಕಾರಣರಾಗು­ತ್ತಿ­ದ್ದಾರೆ’ ಎಂದು ಹೇಳಿದರು.

‘ಬ್ಯಾಂಕ್‌ಗಳು ಮಾತ್ರವಲ್ಲ; ಸೈಬರ್‌ ಕಳ್ಳರಿಂದಾಗಿ ದೇಶದ ರಕ್ಷಣಾ, ಇಂಧನ ಹಾಗೂ ದೂರಸಂಪರಕ ವ್ಯವಸ್ಥೆ ಭಾರಿ ಅಪಾಯಕ್ಕೆ ಸಿಲುಕಿವೆ. ತಪ್ಪು ಮಾಹಿತಿ ನೀಡುವ ಮೂಲಕ ಜನರ ದಿಕ್ಕುತಪ್ಪಿಸು­ತ್ತಿದ್ದಾರೆ. ಆನ್‌ಲೈನ್‌ ವ್ಯವಸ್ಥೆ­ಯನ್ನೇ ಹಾಳುಗೆಡುವುತ್ತಿ­ದ್ದಾರೆ.

ರಹಸ್ಯ ಹಾಗೂ ಪ್ರಮುಖ ಯೋಜನೆಯ ಅಂಶ­ಗಳನ್ನು ಕದಿಯುತ್ತಿದ್ದಾರೆ. ದತ್ತಾಂಶ­ಗಳನ್ನು ನಾಶಪಡಿಸುತ್ತಿದ್ದಾರೆ. ಇರಾನ್‌ ಅಣ್ವಸ್ತ್ರ ಯೋಜನೆಯ ಪ್ರಮುಖ ಮಾಹಿತಿಯನ್ನೇ ಹಾಳುಗೆಡುವಿ­ದ್ದರು. ಪದವಿ ಕೂಡ ಓದದ­ವರು ಇಂಥ ಕೃತ್ಯ ಎಸಗುವ ಕೌಶಲ ಹೊಂದಿದ್ದಾರೆ’ ಎಂದು ಅವರು ವಿವರಿಸಿದರು.

‘ಸೈಬರ್‌ ಕಳ್ಳರ ಬಗ್ಗೆ ಅಮೆರಿಕ ಕೂಡ ಭಯಭೀತ­ವಾಗಿದೆ. ಸೈಬರ್‌ ಭದ್ರತೆಗಾಗಿ ಸಾವಿರಾರು ಕೋಟಿ ಹಣ ವ್ಯಯಿಸುತ್ತಿದೆ. ಸೈಬರ್‌ ಕಳ್ಳರನ್ನು ನಿಯಂತ್ರಿಸಲು  ಸಂಶೋಧನೆಗಳು, ಅಧ್ಯಯನದ ಮೂಲಕ ಹೊಸ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತ­ದಲ್ಲೂ ಹೆಚ್ಚಿನ ಸಂಶೋಧನೆ ನಡೆಯಬೇಕು. ವಿವಿ­ಗಳಲ್ಲಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಹೊಸ ಕೋರ್ಸ್‌ಗೆ ಅವಕಾಶ ಕಲ್ಪಿಸಬೇಕು. ಪಠ್ಯದಲ್ಲಿ ಬದಲಾ­­ವಣೆ ಮಾಡಬೇಕು. ಅದಕ್ಕಾಗಿ ಯುವ ವಿಜ್ಞಾನಿ­ಗಳನ್ನು ಪ್ರೋತ್ಸಾಹಿಸಬೇಕು’ ಎಂದು ಅಯ್ಯಂಗಾರ್‌ ಪ್ರತಿಪಾದಿಸಿದರು.

‘ರಹಸ್ಯ ಮಾಹಿತಿಗಳನ್ನು ನಮಗೆ ಅರ್ಥವಾಗುವ ಕೋಡ್‌ಗಳಲ್ಲಿ ಮತ್ತೊಬ್ಬರಿಗೆ ರವಾನಿಸಿ ಈ ಕೃತ್ಯಕ್ಕೆ ಕಡಿವಾಣ ಹಾಕಬಹುದು. ಅನುಮಾನ ಬಂದಾಗ ಕೂಡಲೇ ಜಾಗೃತರಾಗಿ ಮಾಹಿತಿ­ ಬದಲಾ­ಯಿ­­ಸಬೇಕು. ಸೈಬರ್‌ ಕಳ್ಳರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆದರೆ ಸುಖಾಸುಮ್ಮನೇ ಆರ್ಥಿಕ ನಷ್ಟ ಅನುಭವಿಸ­ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.