ಬೆಂಗಳೂರು: ಎಚ್.ಎಸ್.ಆರ್ ಲೇಔಟ್ನಲ್ಲಿ ಯುವತಿಯೊಬ್ಬರ ಸೊಂಟ ಮುಟ್ಟಿ ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು, ಆ ಯುವತಿಯ ಸ್ನೇಹಿತರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೇಗೂರಿನ ನಾರಾಯಣಸ್ವಾಮಿ ಹಾಗೂ ಮನೋಜ್ ಬಂಧಿತರು. ಮರಳು ವ್ಯಾಪಾರಿಗಳಾಗಿರುವ ಇವರ ವಿರುದ್ಧ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
‘ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬೀದರ್ನ 25 ವರ್ಷದ ಯುವತಿಯು ಎಚ್.ಎಸ್.ಆರ್ ಲೇಔಟ್ನಲ್ಲಿ ವಾಸವಿದ್ದಾರೆ. ನ. 17ರಂದು ಸಂಜೆ ಜಿಮ್ಗೆ ಹೋಗಿದ್ದ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ವಾಪಸ್ ಮನೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಆರೋಪಿಗಳು, ಹಿಂದಿನಿಂದ ಅವರ ಸೊಂಟ ಮುಟ್ಟಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಗಾಬರಿಗೊಂಡ ಯುವತಿ ಸಹಾಯಕ್ಕಾಗಿ ಚೀರಾಡಿದ್ದರು. ಆಗ ಹತ್ತಿರದಲ್ಲೇ ಇದ್ದ ಜಿಮ್ನಿಂದ ಓಡಿಬಂದ ಯುವತಿಯ ಸ್ನೇಹಿತರು, ಬೈಕ್ನಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದರು. ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.