ಬೆಂಗಳೂರು: ‘ಕರಾವಳಿ ಪ್ರಜ್ಞಾವಂತರಿರುವ ಪ್ರದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶ ಕೋಮುವಾದದ ಪ್ರಯೋಗ ಶಾಲೆಯಾಗಿ ಬದಲಾಗುತ್ತಿದೆ’ ಎಂದು ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಕೆ.ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ನಡೆದ ‘ಸೌಹಾರ್ದಕ್ಕಾಗಿ ಕರ್ನಾಟಕ’ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ನಾವಿಂದು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿಕೊಳ್ಳುವಂತಿಲ್ಲ, ಸ್ವಲ್ಪ ಮಟ್ಟಿಗೆ ಸೌಹಾರ್ದವಾಗಿದ್ದೇವೆ ಅಷ್ಟೇ’ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ‘ಕೋಮುವಾದಿಗಳು ಪದ್ಮಾವತಿ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಈ ಚಿತ್ರ ಕಾದಂಬರಿ ಆಧಾರಿತವಾಗಿದೆ. ನಾವು ಇಂದು ಯಾವುದನ್ನು ಮಾತನಾಡಬೇಕು ಎಂಬುದನ್ನು ಮತ್ತೊಬ್ಬರು ನಿರ್ಧರಿಸುವಂತೆ ಆಗಿರುವುದು ಕಳವಳಕಾರಿ’ ಎಂದರು.
ಪ್ರೊ.ಗಂಗಾಧರಯ್ಯ ಮಾತನಾಡಿ, ‘ಕೋಮುವಾದಿ ಪಕ್ಷಕ್ಕೆ ಈಗ ಸರಿಯಾದ ಪ್ರತಿಸ್ಪರ್ಧಿ ಇಲ್ಲ. ಹೀಗಾಗಿ ಆ ಪಕ್ಷ ಇಷ್ಟು ವ್ಯಾಪಕವಾಗಿ ಬೆಳೆದಿದೆ’ ಎಂದು ವ್ಯಾಖ್ಯಾನಿಸಿದರು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ‘ಜನರ ಭಾವನೆಗಳ್ನು ರಾಷ್ಟ್ರೀಯ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ’ ಎಂದರು.
ಸಮಿತಿಯ ಸದಸ್ಯ ಎಸ್.ವೈ.ಗುರುಶಾಂತ್ ಮಾತನಾಡಿ, ‘ಕೋಮುವಾದಿ ಶಕ್ತಿಗಳ ವಿರುದ್ಧ ಮತ್ತು ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ 201
8ರ ಜ.30ರಂದು ಮಾನವ ಸರಪಳಿ ನಿರ್ಮಿಸುತ್ತೇವೆ. ಕಾರವಾರದಿಂದ ಕೊಡಗು, ವಿಧುರಾಶ್ವತದಿಂದ–ಕೋಲಾರ, ಬಸವಕಲ್ಯಾಣದಿಂದ ಚಾಮರಾಜನಗರ ಮತ್ತು ಬೆಳಗಾವಿಯಿಂದ–ಮೈಸೂರಿನವರೆಗೆ ನಡೆಯುವ ಮಾನವ ಸರಪಳಿಯಲ್ಲಿ 12 ಲಕ್ಷ ಮಂದಿ ಭಾಗಿಯಾಗಲಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.