ಬೆಂಗಳೂರು: ‘ಮಂದಿರಗಳಲ್ಲಿಯೂ ಅತ್ಯಾಚಾರ ನಡೆಯುತ್ತದೆಎಂದರೆ ಹೆಣ್ಣುಮಕ್ಕಳಿಗೆ ಸುರಕ್ಷಿತ ಜಾಗ ಎಲ್ಲಿದೆ’ ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಪ್ರಶ್ನಿಸಿದರು.
ಮಕ್ಕಳ ಮೇಲಿನ ಅತ್ಯಾಚಾರ ವಿರೋಧಿಸಿ ನಗರದಲ್ಲಿ ಗುರುವಾರ ‘ಹ್ಯುಮನೈಸಿಂಗ್ ಇಂಡಿಯಾ’ ಆಯೋಜಿಸಿದ್ದ ಶಾಂತಿ ನಡಿಗೆಯಲ್ಲಿ ಅವರು ಮಾತನಾಡಿದರು.
‘ನಮ್ಮ ಸಮಾಜದಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದ್ದರೂ ನಾವು ಕಣ್ಣು ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಮಕ್ಕಳ ಮೇಲಿನ ದೌರ್ಜನ್ಯ, ಅಹಿಂಸೆ ನಿಲ್ಲುವವರೆಗೂ ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸಲು ಹೇಗೆ ಸಾಧ್ಯ. ಇಂತಹ ಪ್ರಕರಣಗಳನ್ನೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅತ್ಯಾಚಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡದ ಧರ್ಮಾಂಧರು ನಮ್ಮ ನಡುವೆ ಇದ್ದಾರೆ’ ಎಂದರು.
‘ಅತ್ಯಾಚಾರಿಗಳ ವಿರುದ್ಧ ಹೆಣ್ಣುಮಕ್ಕಳು ಬೀದಿಗೆ ಇಳಿಯಬೇಕು. ಸೂರ್ಯನ ಬೆಳಕು ಹೆಣ್ಣು ಮತ್ತು ಗಂಡು ಎಂದು ತಾರತಮ್ಯ ಮಾಡದೆ ಎಲ್ಲರ ಮೇಲೂ ಒಂದೇ ರೀತಿ ತನ್ನ ಪ್ರಭಾವ ಬೀರುತ್ತದೆ. ಆದರೆ ಮನುಷ್ಯ ಮಾತ್ರ ಈ ರೀತಿಯ ಭಿನ್ನತೆಗಳನ್ನು ಸೃಷ್ಟಿಸಿಕೊಂಡಿದ್ದಾನೆ’ ಎಂದು ಅವರು ಪ್ರತಿಪಾದಿಸಿದರು.
‘ಬಸವಣ್ಣ ಲಿಂಗಾಯತ ಸಮುದಾಯದವರಿಗೆ ಮಾತ್ರ ಸೇರಿದವರಲ್ಲ. ಅವರು ಶಾಂತಿಯ ಪ್ರತೀಕ. ಯಾವುದೇ ಧರ್ಮ ಅಥವಾ ಜನಾಂಗಕ್ಕೆ ಅವರು ಸೇರಿದವರಲ್ಲ. ಅವರಿಂದ ನಾನು ಕೂಡ ಪ್ರೇರಣೆ ಪಡೆದುಕೊಂಡಿದ್ದೇನೆ’ ಎಂದರು.
ಶಾಂತಿ ನಡಿಗೆಯಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಪ್ಪು ಉಡುಗೆ ಧರಿಸಿ ಶಾಂತಿಯ ಸಂಕೇತವಾಗಿ ಬಿಳಿ ಬಟ್ಟೆಯನ್ನು ಹಣೆಗೆ ಕಟ್ಟಿಕೊಂಡಿದ್ದರು.
‘ಅತ್ಯಾಚಾರಿಗಳಿಗೆ ನಮ್ಮ ಸಮಾಜದಲ್ಲಿ ಸ್ಥಳವಿಲ್ಲ’, ‘ಅತ್ಯಾಚಾರಕ್ಕೆ ಧರ್ಮವಿಲ್ಲ’, ‘ಪುರುಷ ಮನಸ್ಥಿತಿಯಿಂದ ಹೊರಬಂದು ನಮ್ಮನ್ನು ನೋಡಿ’ ಎಂಬ ಘೋಷವಾಕ್ಯಗಳನ್ನು ಒಳಗೊಂಡ ಭಿತ್ತಿಚಿತ್ರಗಳನ್ನು ಹಿಡಿದು ಶಾಂತಿ ನಗರದ ಸೇಂಟ್ ಜೋಸೆಫ್ ಕಾಲೇಜು ಆವರಣದಿಂದ ಪುರಭವನದವರೆಗೆ ಸಾಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.