ADVERTISEMENT

‘ಮಾತೃಭಾಷೆ ಕಡ್ಡಾಯವಾಗಬೇಕು’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಬೆಂಗಳೂರು: ‘ಅಮೃತ ಸೋಮೇಶ್ವರ ಅವರ ಮಾತೃಭಾಷೆ ಮಲಯಾಳಿ ಆದರೂ ಅವರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಸಾಹಿತ್ಯ ರಚಿಸುವ ಮೂಲಕ ಆ ಭಾಷೆಗಳನ್ನು  ಶ್ರೀಮಂತಗೊಳಿ­ಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ತುಳುಕೂಟ ಬೆಂಗಳೂರು ವತಿಯಿಂದ ನಗರದಲ್ಲಿ ಭಾನುವಾರ ಏರ್ಪ­ಡಿಸಿದ್ದ ತುಳು ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರ 80ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ­ದರು.

‘ತಮ್ಮ ಇಳಿ ವಯಸ್ಸಿನಲ್ಲಿಯೂ ಅವರು ಸಾಹಿತ್ಯದ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ರೀತಿ ಬೆರಗು ಮೂಡಿಸುತ್ತದೆ. ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ ಸಿಕ್ಕಿಲ್ಲ. ಅದನ್ನು ನೀಡುವಂತೆ ವಿಶ್ವವಿದ್ಯಾಲಯದ ಕುಲಪತಿ ಹಿ.ಚಿ.ಬೋರಲಿಂಗಯ್ಯ ಅವರಿಗೆ ಪರಿಷತ್ತಿನ ವತಿಯಿಂದ ಪತ್ರ ಬರೆಯಲಾಗುವುದು’ ಎಂದರು.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಉಳಿದರೆ ಮಾತ್ರ ಕನ್ನಡ ಸಾಂಸ್ಕೃತಿಕ ಭಾಷೆಯಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಜನಾಂಗಕ್ಕೆ ನಮ್ಮ ಭಾಷೆ ತಲುಪಬೇಕಾದರೆ ಕನ್ನಡ, ತುಳು ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯಗೊಳಿ­ಸಬೇಕು’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಸೋಮೇಶ್ವರ ಅವರ ಕೊಡುಗೆ ಅಪಾರ.  ಅವರು ಕನ್ನಡದಲ್ಲಿ ನಾಲ್ಕು ಕಥಾ ಸಂಕಲನಗಳು, ಹಲವು ಕವನ ಸಂಕಲನಗಳು ಹಾಗೂ ಒಂದು ಕಾದಂಬರಿ ರಚಿಸಿದ್ದಾರೆ. ಆದರೆ, ಬಹುತೇಕರಿಗೆ ಅವರ ಕೃತಿಗಳ ಬಗ್ಗೆ ಗೊತ್ತಿಲ್ಲ. ಸಾಹಿತ್ಯ ಪರಿಷತ್ತು ಅವರ ಕೃತಿಗಳನ್ನು ಸಮಗ್ರ ಸಂಪುಟದಲ್ಲಿ ಪ್ರಕಟಿಸಿದರೆ ಪ್ರಶಸ್ತಿಗಿಂತ ಹೆಚ್ಚಿನ ಗೌರವ ನೀಡಿದಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.