ADVERTISEMENT

‘ಸರಳ ಜೀವನಕ್ಕೆ ಪುಸ್ತಕ ಪ್ರೇರಣೆ’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:54 IST
Last Updated 19 ಡಿಸೆಂಬರ್ 2014, 19:54 IST

ಬೆಂಗಳೂರು: ‘ಪುಸ್ತಕ ಓದುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗುತ್ತದೆ. ಸರಳ ಜೀವನ, ಉನ್ನತ ಯೋಚನೆಗಳಿಗೆ ಪ್ರೇರಣೆಯಾಗುತ್ತವೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘವು ನಗರದ ಜೆ.ಪಿ ನಗರದ ಎಲಾನ್‌ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘11 ನೇ ಬೆಂಗಳೂರು ಪುಸ್ತಕೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.

‘ಬೇರೆಯವರಿಗೆ ಯಾವುದೇ ಉಡುಗೊರೆಗಳನ್ನು ನೀಡದೆ, ಅವರಿಗೆ  ಪುಸ್ತಕಗಳನ್ನು ನೀಡಿ, ಪುಸ್ತಕಗಳಿಂದ ಅವರಲ್ಲಿಯೂ ಜ್ಞಾನ ಬೆಳೆಯುತ್ತದೆ ಹಾಗೂ ನಿಮಗೆ ಒಂದು ಒಳ್ಳೆಯ ಕೆಲಸ ಮಾಡಿದ ಅನುಭವವಾ­ಗುತ್ತದೆ’ ಎಂದರು.

ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಮಾತನಾಡಿ, ‘ಪುಸ್ತಕೋತ್ಸವವು ಅರಮನೆ ಮೈದಾನದಿಂದ ಬಡಾ­ವಣೆಗೆ ಬಂದಿರುವುದು ಸಂತಸ ತಂದಿದೆ. ಪುಸ್ತಕಗಳು ಶ್ರೀಮಂತರಿಗೆ ಮತ್ತು ವಿದ್ಯಾವಂತರಿಗೆ ಮಾತ್ರ ದೊರೆ­ಯುವಂತಾಗದೆ, ಎಲ್ಲರಿಗೂ ದೊರೆಯು­ವಂತಾಗ­ಬೇಕು’ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌, ‘ಎಲ್ಲಾ ಪ್ರಕಾರದ, ಎಲ್ಲಾ ಭಾಷೆಯ ಪುಸ್ತಕಗಳು ದೊರೆಯುವಂತೆ ಮಾಡುವ ಪುಸ್ತಕೋ­ದ್ಯಾನ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರ ಇದುವರೆಗೂ ಹಸಿರು ನಿಶಾನೆ ತೋರಿಸಿಲ್ಲ’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನು­ಮಂತಯ್ಯ, ‘ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಪುಸ್ತಕಗಳ ಸಗಟು ಖರೀದಿ ಮಾಡಿಲ್ಲ. ಹೀಗಾಗಿ, ಇದನ್ನು ಆದ್ಯತೆ ಮೇಲೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ’ ಎಂದರು.
ಡಿ.28 ರ ವರೆಗೆ ಪುಸ್ತಕೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.