ADVERTISEMENT

16 ರಂದು ವಿ.ವಿ.ಗಳ ಬಂದ್‌

ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:53 IST
Last Updated 8 ಫೆಬ್ರುವರಿ 2016, 19:53 IST

ಬೆಂಗಳೂರು:  ‘ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇಮುಲ ರೋಹಿತ್‌ ಅವರ ಸಾವಿಗೆ ಕಾರಣರಾದವರ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಫೆಬ್ರುವರಿ 16 ರಂದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಬಂದ್‌ಗೆ ಕರೆ ನೀಡಲಾಗಿದೆ’ ಎಂದು ‘ದಲಿತ್‌ ಸ್ಟೂಡೆಂಟ್ಸ್‌ ಫ್ರಂಟ್‌’ (ಡಿಎಸ್ಎಫ್‌) ಸಂಚಾಲಕ ರಾಜಗೋಪಾಲ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಹಿತ್‌ ಅವರ ಸಾವಿಗೆ ಕಾರಣರಾಗಿರುವ ಕೇಂದ್ರ ಸಚಿವರಾದ ಬಂಡಾರು ದತ್ತಾತ್ತೇಯ, ಸ್ಮೃತಿ ಇರಾನಿ, ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಮತ್ತು ಎಬಿವಿಪಿ ಮುಖಂಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಂದ್‌ ದಿನ ಪ್ರತಿಭಟನೆ ನಡೆಸಲಾಗುತ್ತದೆ’ ಎಂದರು.

‘ಎಸ್‌ಎಫ್‌ಐ, ಬಿವಿಎಸ್‌, ಕೆಎಸ್‌ಎಸ್‌್ಎಫ್‌, ಎಸ್ಐಒ, ಎನ್‌ಎಸ್‌ಯುಐ, ಸಮತಾ ಸೈನಿಕ ದಳ, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಹಾಗೂ ಪ್ರಗತಿಪರರು ಈ ನಮ್ಮ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು.

ಕ್ರಮಕ್ಕೆ ಒತ್ತಾಯ:  ರೋಹಿತ್‌ ವೇಮುಲ ಆತ್ಮಹತ್ಯೆಗೆ ಕಾರಣರಾದವರ ಬಂಧನಕ್ಕೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪುರಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿ ಸಂಚಾಲಕ ಎಚ್‌. ಇಂದ್ರಯ್ಯ ಅವರು, ‘ವೇಮುಲ ಆತ್ಮಹತ್ಯೆಗೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಬಂಡಾರು ದತ್ತಾ
ತ್ರೇಯ ಹಾಗೂ ವಿ.ವಿ ಕುಲಪತಿ ಹೊಣೆಯಾಗಿದ್ದಾರೆ’ ಎಂದು ಆರೋಪಿಸಿದರು.

₹50 ಲಕ್ಷ ಪರಿಹಾರಕ್ಕೆ ಒತ್ತಾಯ:  ರೋಹಿತ್‌ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ದೇಶದ ಎಲ್ಲ ವಿವಿಗಳಲ್ಲಿ ತಡೆಹಿಡಿದಿರುವ ವಿದ್ಯಾರ್ಥಿ ವೇತನ
ವನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರೊ. ಸುಖದೇವ ಥೋರಟ್  ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು ಎಂದು ‘ರೋಹಿತ್ ವೇಮುಲ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ’ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.