ADVERTISEMENT

‘ಕಾರ್ಮಿಕರ ಆರೋಗ್ಯ ಚೇತರಿಕೆ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 20:14 IST
Last Updated 2 ಜನವರಿ 2018, 20:14 IST

ಬೆಂಗಳೂರು: ವರ್ತೂರು ಬಳಿಯ ಶೋಭಾ ಡ್ರೀಮ್‌ ಎಕರ್ಸ್‌ ವಸತಿ ಸಮುಚ್ಚಯದ ಕಾರ್ಮಿಕರ ಕಾಲೊನಿಯ ಜನರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ವರ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ.

‘ರಕ್ತಭೇದಿ ಮಾಡಿಕೊಂಡ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದೇವೆ. ಆದರೆ, ಇದು ಕಾಲರಾ ಲಕ್ಷಣವಲ್ಲ’ ಎಂದು ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಾಲೊನಿ ಹಾಗೂ ಬಳಗೆರೆಯ ಸುತ್ತಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಶಂಕಿತ ರೋಗಿಗಳ ಮಲವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅದು ಸಾಧ್ಯವಾಗುತ್ತಿಲ್ಲ’ ಎಂದರು.

ಪ್ರಯೋಗಾಲಯದ ವರದಿ ಬಂದಿಲ್ಲ: ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಮಲವನ್ನು ಪರೀಕ್ಷೆ ನಡೆಸಿದ್ದು, ಕಾಲರಾ ರೋಗಾಣು ಇರುವುದಾಗಿ ವರದಿ ನೀಡಲಾಗಿದೆ. ಇದನ್ನು ಖಾತ್ರಿ ಪಡಿಸಿಕೊಳ್ಳಲು ಮಾದರಿಯನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ವರದಿ ಬಂದಿಲ್ಲ. ಕಾರ್ಮಿಕರ ಕಾಲೊನಿಯ ಸಂಪ್‌ನ ನೀರಿನ ಮಾದರಿಯನ್ನು ಪರೀಕ್ಷಿಸಿದ್ದು, ಅದರಲ್ಲಿ ಇ–ಕೋಲೈ ಎಂಬ ರೋಗಾಣು ಇರುವುದು ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಮನುಷ್ಯನ ಮಲ, ಮೂತ್ರದಲ್ಲಿ ಇರುತ್ತದೆ. ಈ ರೋಗಾಣು ಇರುವ ನೀರನ್ನು ಕುಡಿಯಬಾರದು ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.