ADVERTISEMENT

ಆಸಕ್ತಿದಾಯಕ ವೈರಸನ್ನು ಒಳಗೆ ಬಿಟ್ಟುಕೊಳ್ಳಿ

ವಿದ್ಯಾರ್ಥಿಗಳ ಕುಚೋದ್ಯದ ಪ್ರಶ್ನೆಗೆ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಹಾಸ್ಯಮಯ ಉತ್ತರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 20:05 IST
Last Updated 6 ಜನವರಿ 2018, 20:05 IST
ವಿಶ್ವಮಾನವ ಪ್ರಶಸ್ತಿ ಪಡೆದ ಬಳಿಕ ಪ್ರೊ.ಸಿ.ಎನ್.ಆರ್.ರಾವ್‌ ಮತ್ತು ಅವರ ಪತ್ನಿ ಇಂದುಮತಿ ರಾವ್‌ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್. ಠ್ಯಾಗೂರ್‌, ಪ್ರೊ.ಎಂ.ಆರ್‌.ದೊರೆಸ್ವಾಮಿ, ವಿಶ್ವಮಾನವ ಸಂಸ್ಥೆ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ, ವಿಶ್ವಮಾನವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎನ್.ಬಿ.ದಿನೇಶ್‌, ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಕೆ.ಎನ್.ಬಿ.ಮೂರ್ತಿ ಇದ್ದರು
ವಿಶ್ವಮಾನವ ಪ್ರಶಸ್ತಿ ಪಡೆದ ಬಳಿಕ ಪ್ರೊ.ಸಿ.ಎನ್.ಆರ್.ರಾವ್‌ ಮತ್ತು ಅವರ ಪತ್ನಿ ಇಂದುಮತಿ ರಾವ್‌ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್. ಠ್ಯಾಗೂರ್‌, ಪ್ರೊ.ಎಂ.ಆರ್‌.ದೊರೆಸ್ವಾಮಿ, ವಿಶ್ವಮಾನವ ಸಂಸ್ಥೆ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ, ವಿಶ್ವಮಾನವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎನ್.ಬಿ.ದಿನೇಶ್‌, ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಕೆ.ಎನ್.ಬಿ.ಮೂರ್ತಿ ಇದ್ದರು   

ಬೆಂಗಳೂರು: ‘ಚಿಕ್ಕವನಿದ್ದಾಗ ಸಂಶೋಧನೆ ಎಂಬ ವೈರಸ್‌ ನನ್ನೊಳಗೆ ಹೊಕ್ಕಿತ್ತು. ಅದಿನ್ನೂ ಜೀವಂತವಾಗಿದೆ. ಅದರಿಂದ ಯಾವುದೇ ಅಪಾಯವಿಲ್ಲ. ಹಾಗಾಗಿ ನೀವೂ ಯಾವುದಾದರೂ ಆಸಕ್ತಿದಾಯಕ ವೈರಸನ್ನು ಒಳಗೆ ಬಿಟ್ಟುಕೊಳ್ಳಿ...’

ವಿದ್ಯಾರ್ಥಿಗಳಿಗೆ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರ ಕಿವಿಮಾತು ಇದು.  

ಕರ್ನಾಟಕ ವಿಶ್ವಮಾನವ ಸಂಸ್ಥೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ‘ವಿಶ್ವಮಾನವ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾ
ಡಿದರು. ನಂತರ‌ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಕುಚೋದ್ಯದ ಪ್ರಶ್ನೆಗಳಿಗೆ ಅಷ್ಟೇ ಹಾಸ್ಯಮಯ ಉತ್ತರ ನೀಡಿದರು.

ADVERTISEMENT

ವಿದ್ಯಾರ್ಥಿನಿಯೊಬ್ಬರು ‘ನೀವು ಟೆಕ್ನೊಫೋಬಿಯಾ ಆಗಿರುವುದೇಕೆ’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಾವ್‌, ‘ಹಾಗೇನೂ ಇಲ್ಲವಲ್ಲಾ. ನನ್ನ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳಿವೆ. ₹40 ಕೋಟಿ ಮೌಲ್ಯದ ಸೂಕ್ಷ್ಮದರ್ಶನ ನನ್ನಲ್ಲಿದೆ. ನನ್ನ ಸಂಶೋಧನೆಗೆ ಬೇಕಾಗುವ ಎಲ್ಲಾ ಆಧುನಿಕ ತಂತ್ರಜ್ಞಾನಗಳನ್ನೂ ಬಳಸುತ್ತೇನೆ. ಆದರೆ, ನಮ್ಮ ಹಾದಿಗೆ ಮುಳುವಾಗುವ ತಂತ್ರಜ್ಞಾನದಿಂದ ನಾನು ದೂರವಿದ್ದೇನೆ’ ಎಂದರು.

‘ನಾನು ಲ್ಯಾಪ್‌ಟಾಪ್‌ ಬಳಸುವುದಿಲ್ಲ. ಮೊಬೈಲ್ ಉಪಯೋಗಿಸುತ್ತೇನೆ. ಆದರೆ, ಅದು ಹೆಂಡತಿಯೊಂದಿಗೆ ಮಾತನಾಡಲು ಮಾತ್ರ’ ಎಂದಾಗ ನಗೆಯ ಅಲೆ ಎದ್ದಿತು.

ಗೋಲ್ಡ್‌ ನ್ಯಾನೊ ಪಾರ್ಟಿಕಲ್ಸ್‌ನಿಂದ ಕ್ಯಾನ್ಸರ್‌ ಗುಣಪಡಿಸಬಹುದಾ? ದೇಶದಲ್ಲಿ ರಸಾಯನ ವಿಜ್ಞಾನದ ಸ್ಥಿತಿ ಹೇಗಿದೆ?... ಹೀಗೆ ವಿದ್ಯಾರ್ಥಿಗಳು ಗಹನವಾದ ಪ್ರಶ್ನೆಗಳನ್ನೂ ಕೇಳಿ, ರಾವ್‌ ಅವರಿಂದ ಉತ್ತರ ಪಡೆದುಕೊಂಡರು.

ಪಿ.ಇ.ಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ, ‘ಸಾಹಿತ್ಯಲ್ಲಿ ಮೇರು ಪರ್ವತದಂತಿದ್ದ ಕುವೆಂಪು ಅವರ ಹೆಸರಿನಲ್ಲಿ ಕೊಡುವ ವಿಶ್ವಮಾನವ ಪ್ರಶಸ್ತಿ, ವಿಜ್ಞಾನದ ಮೇರು ಪರ್ವತದಂತಿರುವ ರಾವ್‌ ಅವರಿಗೆ ದೊರೆತಿರುವುದು ಅತ್ಯಂತ ಸೂಕ್ತ’ ಎಂದು ಹೇಳಿದರು.

ಕುವೆಂಪುಗೆ ಭಾರತ ರತ್ನ: ‘ಕುವೆಂಪು ಅವರಿಗೂ ಭಾರತ ರತ್ನ ಸಿಗಲಿಲ್ಲವಲ್ಲ ಎಂಬ ಕೊರಗು ನಮ್ಮನ್ನು ಸದಾ ಕಾಡುತ್ತಿರುತ್ತದೆ. ಈಗಲೂ ಕಾಲ ಮಿಂಚಿಲ್ಲ ಕೇಂದ್ರ ಸರ್ಕಾರ ಮರಣೋತ್ತರವಾಗಿಯಾದರೂ ಅವರಿಗೆ ಭಾರತ ರತ್ನ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.