ADVERTISEMENT

ಅರ್ಧ ಎಕರೆ ಹುಲ್ಲಿನಿಂದ ಲಾಭದ ಹೈನುಗಾರಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:14 IST
Last Updated 16 ಏಪ್ರಿಲ್ 2017, 9:14 IST
ಭಾಲ್ಕಿ ತಾಲ್ಲೂಕಿನ ತರನಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಕಾಂತ ತಳವಾಡೆ ಅವರು ಅರ್ಧ ಎಕರೆ ಹೊಲದಲ್ಲಿ ಸಮೃದ್ಧ ಹುಲ್ಲನ್ನು ಬೆಳೆದಿರುವುದು
ಭಾಲ್ಕಿ ತಾಲ್ಲೂಕಿನ ತರನಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಕಾಂತ ತಳವಾಡೆ ಅವರು ಅರ್ಧ ಎಕರೆ ಹೊಲದಲ್ಲಿ ಸಮೃದ್ಧ ಹುಲ್ಲನ್ನು ಬೆಳೆದಿರುವುದು   

ಭಾಲ್ಕಿ: ಕೃಷಿ ಕಾರ್ಯದಲ್ಲಿ ಲಾಭವಿಲ್ಲ ಎಂದು ಹೇಳುವ ರೈತರೇ ಹೆಚ್ಚು. ಅಂತಹದರಲ್ಲಿ ಅಲ್ಪ ನೀರನ್ನು ಉಪಯೋಗಿಸಿಕೊಂಡು ಅರ್ಧ ಎಕರೆ ಹೊಲದಲ್ಲಿ ಹುಲ್ಲನ್ನು ಬೆಳೆದು, ಹೈನುಗಾರಿಕೆ ನಡೆಸಿ ನಿತ್ಯ ಕೈತುಂಬಾ ಹಣವನ್ನು ಸಂಪಾದಿಸಿ ಇತರರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ತರನಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಕಾಂತ ತಳವಾಡೆ.
ಮಳೆಯನ್ನೇ ಅವಲಂಬಿಸಿಕೊಂಡು ಒಣ ಕೃಷಿ ಮಾಡುವ ಬಹುತೇಕ ರೈತರು ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಸೇರಿದಂತೆ ಇತರ ಒಂದಿಲ್ಲೊಂದು ಸಮಸ್ಯೆಗಳಿಂದ ಪ್ರತಿವರ್ಷ ಉತ್ತಮ ಫಲ ಪಡೆಯಲು ಸಾಧ್ಯವಾಗದೆ ಕಷ್ಟದಲ್ಲಿರುವ ಪರಿಸ್ಥಿತಿ ಇದೆ.

ನಾಲ್ಕು ಎಕರೆ ಹೊಲದಲ್ಲಿ ತೊಗರಿ, ಉದ್ದು, ಸೋಯಾ, ಜೋಳ, ಕಡಲೆ ಬೆಳೆಯಲು ಪ್ರಯತ್ನಿಸುತ್ತಿದ್ದೆ. ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಗಳನ್ನು ಪಡೆಯಲು ಕಷ್ಟಸಾಧ್ಯವಾಯಿತು. ನೀರಾವರಿ ಮೂಲಕವಾದರೂ ಬಂಪರ್‌ ಬೆಳೆ ಪಡೆಯಬೇಕು ಎಂದು ಕೊಳವೆಬಾವಿ ಕೊರೆಯಿಸಿದೆ. ದುರ್ದೈವಕ್ಕೆ ಕೇವಲ 1 ಇಂಚು ಮಾತ್ರ ನೀರು ಲಭ್ಯವಾಯಿತು. ಹೀಗಾಗಿ, ಕೃಷಿ ಕಾರ್ಯದಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು. ಆವಾಗ ತಲೆಗೆ ಹೊಳೆದಿದ್ದೇ ಹೈನುಗಾರಿಕೆ ಉಪಾಯ ಎಂದು ರೈತ ಚಂದ್ರಕಾಂತ ತಳವಾಡೆ ಹೇಳುತ್ತಾರೆ.

ಆರು ತಿಂಗಳ ಹಿಂದೆ ತಾಲ್ಲೂಕಿನ ಮುರಾಳ ಗ್ರಾಮದಿಂದ 1 ಜೆರ್ಸಿ (ಎಚ್‌ಎಫ್‌) ಆಕಳು ₹80 ಸಾವಿರಕ್ಕೆ ಖರೀದಿಸಿ, 1 ಇಂಚು ನೀರಿನಲ್ಲಿ ಅರ್ಧ ಎಕರೆ ಹುಲ್ಲು ಬೆಳೆದು ಪ್ರತಿದಿನ ₹600 ಸಂಪಾದಿಸುತ್ತಿದ್ದೇನೆ. ಗಣಿಕೆ ಹುಲ್ಲಿನ ಬೀಜದಿಂದ ಹುಲ್ಲು ಬೆಳೆದಿದ್ದೇನೆ. ಇದು ಒಂದು ಸಾರಿ ಬಿತ್ತನೆ ಮಾಡಿದರೆ ಮೂರು ವರ್ಷ ನಿರಂತರ ಹುಲ್ಲು ಪಡೆಯಬಹುದು. ಅರ್ಧ ಎಕರೆ ಹುಲ್ಲಿನಲ್ಲಿ ನಾಲ್ಕು ಆಕಳುಗಳನ್ನು ಸಾಕಬಹುದು. ಆಕಳು ನಿತ್ಯ ಬೆಳಿಗ್ಗೆ 10, ಸಂಜೆ 10 ಲೀಟರ್‌ ಹಾಲು ಕೊಡುತ್ತದೆ. ಪ್ರತಿದಿನ ಆಕಳಿಗೆ 96 ಲೀಟರ್‌ ನೀರು, 40 ಕೆ.ಜಿ ಹುಲ್ಲು, 2 ಕೆ.ಜಿ ಹೆಸರಿನ ಇಂಡಿ, ಸೋಯಾ, ಮೆಕ್ಕೆ ಜೋಳ, ಹತ್ತಿ ಕಾಳು, ಬಾರ್ಲಿ ತಿನ್ನಲಿಕ್ಕೆ ಕೊಡುತ್ತೇನೆ. ಆಕಳು ಹೆಚ್ಚಿನ ಹಾಲು ಕೊಡಲಿಕ್ಕೆ ಗೌಧಾರಾ ಶಕ್ತಿ ಪೌಡರ್‌ ನಿತ್ಯ 50 ಗ್ರಾಂ ಕೊಡುತ್ತೇನೆ ಎಂದು ತಿಳಿಸುತ್ತಾರೆ ಅವರು.

ADVERTISEMENT

ಪ್ರತಿ ಲೀಟರ್‌ ಹಾಲಿನ ದರ ₹24 ಸಹಾಯ ಧನ ₹5 ಸೇರಿಸಿ ನಿತ್ಯ ಅಂದಾಜು ₹600 ಸಂಪಾದಿಸುತ್ತೇನೆ. ₹160 ಆಕಳಿನ ವ್ಯವಸ್ಥೆಗೆ ಖರ್ಚು ಮಾಡುತ್ತೇನೆ. ನಿವ್ವಳ ₹400ರಿಂದ ₹450 ಗಳಿಸುತ್ತೇನೆ. ಹೈನುಗಾರಿಕೆಗೆ ನಾನು ಮೀಸಲಿಡುವುದು ದಿನದ ಎರಡು ಗಂಟೆ ಮಾತ್ರ. ಉಳಿದ ಸಮಯದಲ್ಲಿ ಇನ್ನು ಉಳಿದ ಮೂರುವರೆ ಎಕರೆ ಒಣ ಭೂಮಿಯಲ್ಲಿ ಹೆಸರು, ಉದ್ದು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತೇನೆ. ಮುಂಬರುವ ದಿನಗಳಲ್ಲಿ ಇನ್ನೂ 3 ಆಕಳು ತರುವ ಯೋಚನೆ ಇದೆ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಠ ₹2,000 ಸಾವಿರ ಹಣ ಗಳಿಸಬೇಕು ಎಂಬುದು ನನ್ನ ಗುರಿ. ಹೊಲದಲ್ಲಿ ಸ್ವಲ್ಪ ನೀರು ಲಭ್ಯ ಇರುವ ರೈತರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ನಿತ್ಯ ಕೈಯಲ್ಲಿ ಹಣ ಕಾಣಬಹುದು ಎನ್ನುತ್ತಾರೆ ರೈತ ಚಂದ್ರಕಾಂತ ತಳವಾಡೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.