ADVERTISEMENT

ಔರಾದ್‌: ಅನೈರ್ಮಲ್ಯ ಸಮಸ್ಯೆ ಉಲ್ಬಣ

ಪಟ್ಟಣ ಪಂಚಾಯಿತಿ ಎದುರು ಮುಂದುವರೆದ ಪೌರಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 6:09 IST
Last Updated 20 ಜುಲೈ 2017, 6:09 IST
ಔರಾದ್ ಪಟ್ಟಣದ ಬಸ್ ನಿಲ್ದಾಣದ ಬಳಿ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದು
ಔರಾದ್ ಪಟ್ಟಣದ ಬಸ್ ನಿಲ್ದಾಣದ ಬಳಿ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದು   

ಔರಾದ್: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪೌರಕಾರ್ಮಿಕರು ತಮ್ಮ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಎರಡು ವಾರಗಳಿಂದ ಧರಣಿ ನಡೆಸುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಗದೆ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರ ತವರು ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಕೆಲ ವಾರ್ಡ್‌ಗಳಲ್ಲಿ 10–15 ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.  ಕಳೆದ 10 ದಿನಗಳಿಂದ ಶಿಕ್ಷಕರ ಕಾಲೊನಿಗೆ ನೀರು ಪೂರೈಕೆಯಾಗದೇ ಇರುವುದರಿಂದ ಇಲ್ಲಿನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಮಧ್ಯೆ ಕಳೆದ ನಾಲ್ಕು ದಿನಗಳಿಂದ ಪಟ್ಟಣದಲ್ಲಿ ಮಳೆಯಾಗುತ್ತಿದ್ದು, ಚರಂಡಿ ಹೂಳು ತೆಗೆಯದ ಕಾರಣ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಚರಂಡಿಯಲ್ಲಿ ನೀರು   ರಸ್ತೆ ಮೇಲೆ ಮತ್ತು ತಗ್ಗು ಪ್ರದೇಶದ ಮನೆ ಅಂಗಡಿಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳು ಮತ್ತು ಗುಡಿಸಲು ನಿವಾಸಿಗಳಿಗೆ ತೊಂದರೆ ಉಂಟಾಗಿದೆ.

ADVERTISEMENT

‘ಬಾಕಿ ವೇತನ ಪಾವತಿಗಾಗಿ ಎರಡು ವಾರಗಳಿಂದ ಧರಣಿ ನಡೆಸುತ್ತಿದ್ದರೂ ಯಾರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಪೌರಾಡಳಿತ ಸಚಿವರು ನಮ್ಮ ಜಿಲ್ಲೆಯವರೇ ಆದರೂ  ನಮಗೆ ಪರಿಹಾರ ಸಿಕ್ಕಿಲ್ಲ’ ಎಂದು ಪೌರ ಕಾರ್ಮಿಕ ಸಂಘದ ಅಧ್ಯಕ್ಷ ತಿಪ್ಪಣ್ಣ ತಿಳಿಸಿದ್ದಾರೆ.

‘ಸರ್ಕಾರ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಸೇವೆಗೆ ತೆಗೆದುಕೊಳ್ಳುವಂತೆ ಸೂಚಿಸಿದೆ. ಆದರೆ ಧರಣಿ ನಿರತರು ಇದಕ್ಕೆ ಒಪ್ಪುತ್ತಿಲ್ಲ. ಅವರಿಗೆ ನೀಡಿದ ಗಡುವು ಮುಗಿದು ಹೋಗಿದೆ. ನಾಳೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಣುಕಾ ತಿಳಿಸಿದ್ದಾರೆ.

**

ಧರಣಿ ನಿರತ ಪೌರ ಕಾರ್ಮಿಕರಿಗೆ ನೀಡಲಾದ ಗಡುವು ಮುಗಿದು ಹೋಗಿದೆ. ನಾಳೆಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

ರೇಣುಕಾ, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.