ADVERTISEMENT

ಕೋನಮೆಳಕುಂದಾ ಗ್ರಾಮದಲ್ಲಿ ಹಿಂಗಾರು ಬೆಳೆ ಕ್ಷೇತ್ರೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:41 IST
Last Updated 20 ಡಿಸೆಂಬರ್ 2017, 6:41 IST

ಬೀದರ್‌: ಹಿಂಗಾರು ಬೆಳೆ ಕ್ಷೇತ್ರೋತ್ಸವ ಡಿಸೆಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಭಾಲ್ಕಿ ತಾಲ್ಲೂಕಿನ ಕೋನಮೆಳಕುಂದಾ ಗ್ರಾಮದಲ್ಲಿ ನಡೆಯಲಿದೆ ಎಂದು ದಕ್ಷಿಣ ಭಾರತ ನೈಸರ್ಗಿಕ ಕೃಷಿ ಉತ್ಪಾದನಾ ಕಂಪೆನಿಯ ಅಧ್ಯಕ್ಷ ಈಶ್ವರಪ್ಪ ಚಾಕೋತೆ ತಿಳಿಸಿದರು.

ವಿಜಯಪುರ ಜ್ಞಾನ ಯೋಗಾ ಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೊಲ್ಹಾಪುರ ಸಮೀಪದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗವಹಿಸುವರು ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಡಾ.ಎಸ್‌.ಎ. ಪಾಟೀಲ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ರಾಜೇಶ್ವರ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಗಂಗಾಂಬಿಕೆ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಸಿಇಒ ಆರ್.ಸೆಲ್ವಮಣಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ವಿಶ್ವವಿದ್ಯಾಲಯದ ಅಧಿ ಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಹೆಚ್ಚು ಬೆಳೆ ಬೆಳೆಸುವ ಹಪಾಹಪಿ ಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ನಾಶಕ ಬಳಸುತ್ತಿರುವ ಕಾರಣ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ವಿಷಪೂರಿತ ಔಷಧ ಸಿಂಪರಣೆಯಿಂದಾಗಿ ವಿಷವು ಭೂಮಿಯಲ್ಲಿ ಇಂಗಿ ನೀರಿನಲ್ಲಿ ಬೆರೆತುಕೊಳ್ಳುತ್ತಿದೆ ಎಂದು ವಿವರಿ ಸಿದರು.

ರಾಸಾಯನಿಕ ಮಿಶ್ರಣದ ಮೇವು, ಹೊಟ್ಟು, ಹಿಂಡಿ ತಿಂದು ಜಾನುವಾರುಗಳ ಹಾಲು ಕೂಡ ವಿಷವಾಗಿದೆ. ಹೀಗಾಗಿ ಮನುಷ್ಯರಿಗೆ ಅನೇಕ ರೋಗಗಳು ಬರುತ್ತಿವೆ. ಸಾವಯವ ಕೃಷಿ ಪದ್ಧತಿ ಯನ್ನು ಅನುಸರಿಸುವ ಮೂಲಕ ನಮ್ಮ ಆರೋಗ್ಯ ಸದೃಢಗೊಳಿಸಬೇಕಿದೆ ಎಂದು ತಿಳಿಸಿದರು.

ಬೀದರ್‌ನಲ್ಲಿ ಈಗಾಗಲೇ ಪ್ರಮಾ ಣೀಕರಿಸಿದ ಸಿರಿಧಾನ್ಯ, ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ಆರಂಭಿಸಲಾಗಿದೆ. ಸಿರಿಧಾನ್ಯಗಳು ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚು ಪ್ರೋಟಿನ್, ವಿಟಮಿನ್ ಹಾಗೂ ಖನಿಜಾಂಶಗಳನ್ನು ಹೊಂದಿವೆ. ಸಿರಿಧಾನ್ಯದಿಂದ ಮಧು ಮೇಹ, ಮಲಬದ್ದತೆ, ಹೃದಯಾ ಘಾತ, ಕ್ಯಾನ್ಸರ್, ಅಲರ್ಜಿ, ರಕ್ತದ ಒತ್ತಡ ಹಾಗೂ ಬೊಜ್ಜಿನಂತಹ ಕಾಯಿಲೆ ನಿವಾರಿಸಬಹುದಾಗಿದೆ ಎಂದು ಹೇಳಿದರು.

ಈ ಎಲ್ಲ ಪ್ರಮುಖ ಅಂಶಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಿಂಗಾರು ಬೆಳೆ ಕ್ಷೇತ್ರೋತ್ಸವ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕಂಪೆನಿ ನಿರ್ದೇಶಕ ಪ್ರಶಾಂಸ ವಡಗಿರೆ, ಬಾಬುರಾವ್‌ ಕಳಸದಾಳ, ಮಹಾದೇವ ನಾಗೂರೆ, ಸಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.