ADVERTISEMENT

ಚಿಟಗುಪ್ಪ ಎಪಿಎಂಸಿ ಪ್ರಾಂಗಣದ ಅವ್ಯವಸ್ಥೆ

ಮೂಲ ಸೌಲಭ್ಯ ಕಲ್ಪಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:30 IST
Last Updated 5 ಡಿಸೆಂಬರ್ 2016, 9:30 IST

ಚಿಟಗುಪ್ಪ: ಪಟ್ಟಣದ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಕಳೆದ ಹಲವು ವರ್ಷಗಳಿಂದ ಮೂಲ ಸೌಲಭ್ಯ ಗಳಿಂದ ವಂಚಿತವಾಗಿದ್ದು, ಇದರಿಂದಾಗಿ ವ್ಯಾಪಾರಿ ವರ್ಗ ಹಾಗೂ ರೈತರು ತೊಂದರೆಗೆ ಸಿಲುಕಿದ್ದಾರೆ.

ಹುಮನಾಬಾದ್ ತಾಲ್ಲೂಕಿನಲ್ಲಿ ಹುಮನಾಬಾದ್ ಹಾಗೂ ಚಿಟಗುಪ್ಪ ಎರಡು ಕೃಷಿ ಉಪ ಉತ್ಪನ್ನ ಮಾರುಕಟ್ಟೆಗಳಿದ್ದು, ಹೆಚ್ಚಿನ ಆದಾಯ ತರುವಲ್ಲಿ ಪಟ್ಟಣದ ಮಾರುಕಟ್ಟೆ ಮುಂಚೂಣಿಯಲ್ಲಿದೆ ಹೀಗಿದ್ದೂ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಅಡತ್ ವ್ಯಾಪಾರಿಗಳು ತಿಳಿಸುತ್ತಾರೆ.

ಪ್ರಾಂಗಣದ ಎರಡು ಮುಖ್ಯ ದ್ವಾರ ಸೇರಿದಂತೆ ಇಲ್ಲಿನ ಮೂರು ಮುಖ್ಯ ರಸ್ತೆಗಳು ಕಾಂಕ್ರೆಟ್ ಕಾಣದೆ ಕಚ್ಚಾ ರಸ್ತೆಗಳಾಗಿಯೇ ಉಳಿದಿವೆ. ಈ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಚರಂಡಿ ನೀರು ಹರಿದು ಕೊಳಚೆ ಪ್ರದೇಶಗಳಂತೆ ಕಾಣುತ್ತಿದೆ.

ಪ್ರಾಂಗಣದಲ್ಲಿನ ರಸ್ತೆಗಳಲ್ಲಿ ಆರಂಭಿಸಲಾಗಿರುವ ಚರಂಡಿಗಳ ನಿರ್ಮಾಣ ಕಾರ್ಯ ಅಪೂರ್ಣವಾಗಿದ್ದು, ಕೊಳಚೆ ನೀರು ಹರಿದು ಹೋಗುತ್ತಿಲ್ಲ. ಚರಂಡಿ ತಗ್ಗು ತುಂಬಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿರುವುದರಿಂದ ಈ ಪ್ರದೇಶದಲ್ಲಿರುವ ಅಂಗಡಿಗಳಿಗೆ ಗಬ್ಬು ವಾಸನೆ ಬರುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ನೀರಿನ ತೊಟ್ಟಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಕ್ಕೆ ಎಲ್ಲರಿಗೂ ತೊಂದರೆ ಆಗುತ್ತಿದೆ.

ರೈತರಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿಲ್ಲ. ರೈತರ ವಿಶ್ರಾಂತಿ ಭವನ ನಿರ್ಮಾಣವಾಗಬೇಕು. ಪ್ರಾಂಗಣದಲ್ಲಿ ಸಾರ್ವಜನಿಕ ಮೂತ್ರಾಲಯ ನಿರ್ಮಾಣ ಆಗಬೇಕಿದೆ. ಮೂತ್ರಾಲಯಗಳು ಇಲ್ಲದಕ್ಕೆ ವ್ಯಾಪಾರಿ, ರೈತರು ಎಲ್ಲರೂ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಚಂದ್ರಕಾಂತ, ಪವನ್, ಶಿವಲಿಂಗಯ್ಯ. ಅರುಣ ಕುಮಾರ್, ಸೋಮಶೇಖರ್ ಅಳಲು ತೋಡಿಕೊಂಡರು.

ಪ್ರಾಂಗಣಕ್ಕೆ ದವಸ ಧಾನ್ಯ ತೆಗೆದುಕೊಂಡು ಬರುವ ರೈತರಿಗೆ ಪ್ರಾಂಗಣದಲ್ಲಿ ಒಂದು ಸುಸಜ್ಜಿತವಾದ ಉತ್ತಮ ಉಪಹಾರ ಗ್ರಹ ಅವಶ್ಯಕತೆ ಇದ್ದು, ಮಾರುಕಟ್ಟೆ ಅಧಿಕಾರಿಗಳು ತಕ್ಷಣ ಉಪಹಾರ ಗ್ರಹ ನಿರ್ಮಾಣ ಮಾಡಬೇಕು.ರಾತ್ರಿ ಪ್ರಾಂಗಣದಲ್ಲಿಯ ಬೀದಿ ದೀಪಗಳು ಎಲ್ಲವೂ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ರೈತರಾದ ಬಸವರಾಜ್, ಜಗದೀಶ್ ಹೇಳುತ್ತಾರೆ.

*
ಚಿಟಗುಪ್ಪದ ಎಪಿಎಂಸಿ ಪ್ರಾಂಗಣ ಕಳೆದ ಹಲವು ವರ್ಷಗಳಿಂದ ಸಮಸ್ಯೆಗಳ ಆಗರವಾಗಿದ್ದು, ಇಲಾಖೆಗೆ ಆದಾಯ ನೀಡುವಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ಅಧಿಕಾರಿಗಳು ಎಚ್ಚೆತ್ತು ತಕ್ಷಣ ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಒತ್ತುಕೊಡಬೇಕು.
–ಮಲ್ಲಿಕಾರ್ಜುನ ಪಾಟೀಲ್, ಸದಸ್ಯರು, ಪುರಸಭೆ ಚಿಟಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT