ADVERTISEMENT

‘ದುರಾಸೆ ದುಃಖಕ್ಕೆ ಮೂಲ ಕಾರಣ’

ವಿವಿಧೆಡೆ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ, ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:16 IST
Last Updated 16 ಜನವರಿ 2017, 8:16 IST

ಬೀದರ್: ದುರಾಸೆಯೇ ದುಃಖಕ್ಕೆ ಮೂಲ ಕಾರಣವಾಗಿದೆ. ಪ್ರತಿಯೊಬ್ಬರು ದುರಾಸೆಯಿಂದ ಮುಕ್ತರಾದಾಗ ಮಾತ್ರ ಸುಖದಿಂದ ಜೀವನ ನಡೆಸಲು ಸಾಧ್ಯವಿದೆ ಎಂದು ಶಿವಯೋಗಿ ಸಿದ್ಧರಾಮೇಶ್ವರ ಅವರು ತಮ್ಮ ವಚನದಲ್ಲಿ ಪ್ರತಿಪಾದಿಸಿದ್ದಾರೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾ ಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರತಿಯೊಬ್ಬರು ಕೇವಲ ತಮ್ಮ ಹಿತಕ್ಕಾಗಿ ಅಲ್ಲದೇ ಇತರರ ಹಿತ ಕ್ಕಾಗಿಯೂ ಶ್ರಮಿಸಬೇಕು ಹಾಗೂ ಆಸೆ ಯಿಂದ ಮುಕ್ತರಾಗಬೇಕು ಎಂಬ ಸಂದೇಶವನ್ನು ಸಿದ್ಧರಾಮೇಶ್ವರ ಅವರು ಸಾರಿದ್ದಾರೆ. ಅವರ ಚಿಂತನೆಗಳು ಎಂ ದಿಗೂ ಪ್ರಸ್ತುತವಾಗಿವೆ ಎಂದರು.

ಇಡೀ ಪ್ರಕೃತಿಯು ಇತರರಿಗಾಗಿ ಇರುತ್ತದೆ. ಆದರೆ, ಸಾಕಷ್ಟು ತಿಳಿವಳಿಕೆಯುಳ್ಳ ಮನುಷ್ಯ ಮಾತ್ರ ಇತರರಿಗಾಗಿ ಬದುಕುವುದಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ ಎಂದರು.

12ನೇ ಶತಮಾನದಲ್ಲಿ ಮೂಢನಂಬಿಕೆ ಹಾಗೂ ಅಂಧ ಕಾರವನ್ನು ಅಳಿಸಿದ ಶರಣರಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಒಬ್ಬರು. ಇವರು ಸೊನ್ನಲಿಗೆಯಲ್ಲಿ ಬಾವಿ ಹಾಗೂ ಕೆರೆಗಳನ್ನು ನಿರ್ಮಿಸುವ ಮೂಲಕ ಜನಸಾಮಾನ್ಯರ ಸೇವೆ ಮಾಡಿದ್ದರು. ಅಲ್ಲಿಂದ ಬಸವಕಲ್ಯಾಣಕ್ಕೆ ಬಂದು ಶರಣರ ಜೊತೆ ಸೇರಿ ಸರಳವಾದ ಅನೇಕ ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

ನಮ್ಮ ಮನದ ಮಲಿನ ತೊಳೆಯ ಬೇಕೆಂದರೆ ನಾವು ಶರಣರ ವಚನ ಗಳನ್ನು ಅಧ್ಯಯನ ಮಾಡಬೇಕು ಎಂದರು. ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ರಹೀಂ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಭೋವಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಮಾಣಿಕರಾವ್ ವಾಡೇಕರ, ಪ್ರಮುಖರಾದ ಪುಂಡಲೀಕ ರಾವ್, ಮಾರುತಿ, ಎಸ್.ಕೆ. ಪಾಟೀಲ ಉಪಸ್ಥಿತರಿದ್ದರು. ಗಾಯಕಿ ಸೋನಾಕ್ಷಿ ಪಾಟೀಲ ನಾಡಗೀತೆ ಹಾಡಿದರು. ಶಿವಪುತ್ರಪ್ಪ ತಬಲಾ ಸಾಥ್ ನೀಡಿದರು.

ಮೆರವಣಿಗೆ: ಇದಕ್ಕೂ ಮುಂಚೆ ಜಿಲ್ಲಾ ಡಳಿತ ವತಿಯಿಂದ ನಗರದಲ್ಲಿ ಅಲಂಕೃತ ವಾಹದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾ ದೇವ ಸಿದ್ಧಾರಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಜಿಲ್ಲಾ ರಂಗಮಂದಿರದ ವರೆಗೆ ನಡೆದ ಮೆರವಣಿಗೆಯಲ್ಲಿ ಔರಾದ್ ತಾಲ್ಲೂಕಿನ ಜೋಚ್ನಾದ ಸರಸ್ವತಿ ಮಹಿಳಾ ಕೋಲಾಟ ತಂಡದ ಸದಸ್ಯರಿಂದ ಕೋಲಾಟ ಪ್ರದರ್ಶನ ಹಾಗೂ ಹಲಗೆ ಕುಣಿತ ಗಮನ ಸೆಳೆಯಿತು.

*

ಭೋವಿ ಸಮುದಾಯದವರು ಸರ್ಕಾರದ ವಿವಿಧ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.  ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು.
- ರಹೀಂ ಖಾನ್‌ ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.