ADVERTISEMENT

ನೀರಿನ ಸಮಸ್ಯೆ ಉಂಟಾಗದಂತೆ ಕಾಳಜಿವಹಿಸಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:51 IST
Last Updated 23 ಏಪ್ರಿಲ್ 2017, 8:51 IST

ಬಸವಕಲ್ಯಾಣ: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕಾಳಜಿವಹಿಸಿ ಕೆಲಸ ನಿರ್ವಹಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಸೂಚನೆ ನೀಡಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಘೋಟಾಳದ ಸರ್ಕಾರಿ ಶಾಲೆ ಮತ್ತು ಹುಲಸೂರನಲ್ಲಿನ ಪೈಪ್‌ಲೈನ್ ಸಮಸ್ಯೆ ಶೀಘ್ರದಲ್ಲಿ ಪರಿಹರಿಸಬೇಕು’ ಎಂದು ಹೇಳಿದರು.

ಸದಸ್ಯ ಸಿದ್ರಾಮ ಕಾಮಣ್ಣ ಮಾತನಾಡಿ, ಬೇಲೂರನಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ವಿನಂತಿಸಿದರು.ಗೋವಿಂದರಾವ ಸೋಮವಂಶಿ ಮಾತನಾಡಿ, ‘ಹುಲಸೂರಗೆ ನೀರು ಪೊರೈಸಲು ಚುಳಕಿನಾಲಾ ಜಲಾಶಯದಿಂದ ಅಳವಡಿಸಿರುವ ಪೈಪ್ ಲೈನ್ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಹೆಚ್ಚಿನ ಅಶ್ವಶಕ್ತಿಯ ಪಂಪ್‌ಸೆಟ್ ಅಳವಡಿಸಬೇಕು’ ಎಂದು ಕೋರಿದರು.

ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಬಸವರಾಜ ಚಿರಡೆ ಮಾತನಾಡಿ, ‘ಹಾಮುನಗರ, ಮೈಸಲಗಾ, ಗಣಪತತಾಂಡಾ, ಶಿರೂರಿ, ಶಿರೂರಿವಾಡಿ, ಯಲ್ಲದಗುಂಡಿ, ಹುಲಸೂರನ ಪರಿಶಿಷ್ಟ ಜಾತಿಯವರ ಓಣಿ, ಚಿಕ್ಕನಾಗಾಂವ, ಬಾಗಹಿಪ್ಪರ್ಗಾ, ರಾಮನಗರತಾಂಡಾ, ಬೆಟಬಾಲ್ಕುಂದಾ, ಮಂಠಾಳ, ಹಂದ್ರಾಳ, ಏಕಂಬಾ, ಯರಂಡಿ, ಚಿತ್ತಕೋಟಾ, ಲಾಡವಂತಿ, ಪ್ರತಾಪುರ, ತಡೋಳಾ, ಕಿಟ್ಟಾ ಮುಂತಾದೆಡೆ ಕೊಳವೆಬಾವಿ ಕೊರೆಯಲು ಮತ್ತು ವಿವಿಧ ಕಾರಣಗಳಿಂದ ಉಂಟಾದ ನೀರಿನ ಸಮಸ್ಯೆ ಬಗೆಹರಿಸಲು ಅನುದಾನ ಬಿಡುಗಡೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಅಂಗನವಾಡಿ ಕಟ್ಟಡಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕು ಎಂದೂ ಕೆಲ ಸದಸ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಕೇಳಿಕೊಂಡರು.ಉಪಾಧ್ಯಕ್ಷ ಸಂಗಮೇಶ ಬಿರಾದಾರ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕಾರ್ಯ ನಿರ್ವಹಣಾ ಅಧಿಕಾರಿ ವಿಜಯಕುಮಾರ ಮಡ್ಡೆ, ಸದಸ್ಯರಾದ ಗುರುನಾಥ ಸೋನಕೆ, ನರಸಾರೆಡ್ಡಿ, ರಾಜೀವ ಢೋಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.