ADVERTISEMENT

ರೈತರಿಂದ ಬೀದರ್–ಔರಾದ್ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:39 IST
Last Updated 28 ನವೆಂಬರ್ 2017, 6:39 IST

ಔರಾದ್: ಹೊಲಗಳಿಗೆ ಹೋಗುವ ರಸ್ತೆ ಅತಿಕ್ರಮಣ ತೆರವು ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ಕೌಠಾ (ಬಿ) ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಬಸವರಾಜ ಬಾಲಾದೆ, ರಮೇಶ ಬಿರಾದಾರ, ಸಂತೋಷ ಬೆಳ್ಳೂರ್ ನೇತೃತ್ವದಲ್ಲಿ ನೂರಾರು ರೈತರು ಕೌಠಾದಲ್ಲಿ ಬೀದರ್–ಔರಾದ್ ರಸ್ತೆ ತಡೆ ನಡೆಸಿದರು.

‘ಮಾಂಜ್ರಾ ನದಿ ಬ್ಯಾರೇಜ್‌ಗೆ ಹೋಗಲು 33 ಅಡಿ ಅಗಲದ ಹಳೆಯದಾದ ರಸ್ತೆ ಇದೆ. ಮೊದಲು ಬೀದರ್‌ಗೆ ಹೋಗಲು ಇದೇ ರಸ್ತೆ ಕಾಲು ದಾರಿಯಾಗಿತ್ತು. ಗ್ರಾಮದ ಅರ್ಧದಷ್ಟು ರೈತರು ಈಗಲೂ ಇದೇ ರಸ್ತೆ ಉಪಯೋಗಿಸುತ್ತಾರೆ. ಆದರೆ ಈ ರಸ್ತೆ ಈಗ ಅತಿಕ್ರಮಣವಾಗಿ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ಪ್ರತಿಭಟನಾ ನಿರತ ರೈತರು ದೂರಿದರು.

‘ಈಗಾಗಲೇ ಕಬ್ಬು ಕಟಾವು ಆರಂಭವಾಗಿದೆ. ಈ ರಸ್ತೆ ಆಚೆ 500 ಎಕರೆಯಷ್ಟು ಕಬ್ಬಿನ ಜಮೀನು ಇದೆ. ಆದರೆ ಅಲ್ಲಿಗೆ ಲಾರಿ ಹೋಗಲು ಆಗದೆ ಕಟಾವು ನಿಂತು ಹೋಗಿದೆ. ಇದರಿಂದಾಗಿ ಹತ್ತಾರು ರೈತ ಕುಟುಂಬಗಳು ತೊಂದರೆಯಲ್ಲಿವೆ’ ಎಂದು ರೈತ ಮುಖಂಡರು ಅಧಿಕಾರಿಗಳ ಎದುರು ಗೋಳು ತೋಡಿಕೊಂಡರು.

ADVERTISEMENT

ಅರ್ಧ ಗಂಟೆ ರಸ್ತೆ ತಡೆ ಮಾಡಿದ ಪರಿಣಾಮ ಎರಡೂ ಕಡೆ ವಾಹನ ನಿಂತು ಪ್ರಯಾಣಿಕರು ಪರದಾಡಬೇಕಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪಿಎಸ್ಐ ರಘುನಾಥರೆಡ್ಡಿ ಅವರು ‘ರಸ್ತೆ ಮೇಲೆ ಕುಳಿತು ಜನರಿಗೆ ತೊಂದರೆ ಮಾಡುವುದು ಕಾನೂನು ಬಾಹಿರ. ನಿಮ್ಮ ಸಮಸ್ಯೆ ಯಾರ ಬಳಿ ಇದೆಯೋ ಅಲ್ಲಿ ಹೋಗಿ ಧರಣಿ ಮಾಡಿ’ ಎಂದು ಎಚ್ಚರಿಕೆ ನೀಡಿದರು. ಇದರಿಂದಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು ಕೆಲ ಹೊತ್ತು ಪರಿಸ್ಥಿತಿ ಬಿಗುವಿನ ವಾತಾವರಣ ನಿರ್ಮಾಣ ವಾಗಿತ್ತು.

ನಂತರ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ನೀವು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

‘ರಸ್ತೆ ಅತಿಕ್ರಮಣವಾಗಿರುವ ಕುರಿತಂತೆ ಸರ್ವೆ ಮಾಡಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ವಾಸ್ತವಿಕ ಮಾಹಿತಿ ಪಡೆದು ಅತಿಕ್ರಮಣ ಮಾಡಿದವರು ಯಾರೇ ಇದ್ದರೂ ಅಂತಹ ಕಟ್ಟಡ ತೆರವು ಮಾಡಲಾಗುವುದು’ ಎಂದು ಹೇಳಿ ಸಮಾಧಾನ ಮಾಡಿದರು. ತಹಶೀಲ್ದಾರ್ ಎಂ. ಚಂದ್ರಶೇಖರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗನ್ನಾಮೂರ್ತಿ, ಸಿಪಿಐ ರಮೇಶ ಮೈಲೂರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.