ADVERTISEMENT

ವಚನ ಸಾಹಿತ್ಯ ಶರಣರ ಅನುಭವದ ಸಾಹಿತ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:54 IST
Last Updated 23 ಏಪ್ರಿಲ್ 2017, 8:54 IST

ಭಾಲ್ಕಿ: ‘ವಚನ ಸಾಹಿತ್ಯ ಕೇವಲ ಶಬ್ದಗಳನ್ನೊಳಗೊಂಡಿರುವ ಸಾಹಿತ್ಯವಾಗಿರದೆ ಶರಣರ ಸ್ವ-ಅನುಭವದ ಸಾಹಿತ್ಯವಾಗಿದೆ’ ಎಂದು ಬಸವಯೋಗಾಶ್ರಮ ಕೌಠಾದ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಚನ್ನಸವಾಶ್ರಮದಲ್ಲಿ ಲಿಂ.ಚನ್ನಬಸವ ಪಟ್ಟದ್ದೇವರ 18ನೇ ಸ್ಮರಣೋತ್ಸವ, ವಚನ ಜಾತ್ರೆ ನಿಮಿತ್ತ ಶನಿವಾರ ನಡೆದ ವಚನಕಾರರ ದಾಂಪತ್ಯ ಜೀವನ ಚಿಂತನಗೋಷ್ಠಿ, ಸಾಮೂಹಿಕ ಕಲ್ಯಾಣದಲ್ಲಿ ಮಾತನಾಡಿದರು.

‘ವಚನ ಸಾಹಿತ್ಯದಲ್ಲಿ ಸಮಾನತೆ, ಜಾತ್ಯತೀತ, ಮೂಢನಂಬಿಕೆ ವಿರೋಧಿ ತತ್ವಗಳು ಇದ್ದುದರಿಂದ ವೈದಿಕ ಪರಂಪರೆಯವರು ಇನ್ನು ನಮಗೆ ಉಳಿಗಾಲವಿಲ್ಲ ಎಂಬುದನ್ನು ಅರಿತು ಕಲ್ಯಾಣ ಕ್ರಾಂತಿಯ ಕಾಲದಲ್ಲಿ ವಚನ ಸಾಹಿತ್ಯವನ್ನು ಸುಟ್ಟು ನಾಶಪಡಿಸಿದರು’ ಎಂದು ತಿಳಿಸಿದರು.‘ಸರ್ಕಾರದಿಂದ 3,488 ಪುಟಗಳ ಸಮಗ್ರ ವಚನ ಸಾಹಿತ್ಯ ಹೊರ ತರಲಾಗಿದ್ದು, ಬೆಲೆ ₹600 ಇದೆ. ಎಲ್ಲರೂ ಅವುಗಳನ್ನು ಖರೀದಿಸಿ ನಿತ್ಯ ಅಭ್ಯಸಿಸಬೇಕು’ ಎಂದರು.

ಅವರಾದ ಚರಂತಿ ಮಠದ ಮರುಳುಸಿದ್ಧ ಶಿವಾಚಾರ್ಯರು, ಮರುಘೇಂದ್ರ ಶಿವಯೋಗಿ ಮಠದ ನೀಲಕಂಠ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಶಿವಾನಂದ ಹೈಬತಪುರೆ ಮಾತನಾಡಿದರು. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಮಹಾರಾಷ್ಟ್ರ ಬಸವ ಪರಿಷತ್ ಉಪಾಧ್ಯಕ್ಷ ರಮೇಶ ಕೋರೆ, ಚಂದ್ರಶೇಖರ ಹುಣಸನಾಳೆ, ನರಸಿಂಗ ಮುಳೆ, ದಶರಥ ವಡತಿಲೆ, ಚಂದ್ರಕಾಂತ ವೈಜಾಪೂರೆ, ಬಸವರಾಜ ಬಿರಾದಾರ, ಮಹಾಲಿಂಗ ಬೆಲ್ದಾಳ, ಅಪ್ಪಾರಾವ ನವಡೆ ಇದ್ದರು. ಪುಟಾಣಿ ಪಂಟ್ರು ಖ್ಯಾತಿಯ ಮಧೂಸುದನ್‌ ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ನೆರೆದವರ ಮನ ಸೆಳೆದರು.

ADVERTISEMENT

ಸಂಜಯ ವಾಡೇಕರ, ಅಪ್ಪಾರಾವ ಲಿಂಗಶೆಟ್ಟೆಪ್ಪ ಸಾಹು, ಪಿ.ಸಂಗಮೇಶ್ವರ ಸಾಹು, ಪಿ.ಜಗದೀಶ್ವರ, ಸುಲಗುಂಟಿ ಸಿದ್ದೇಶ್ವರ, ಎಚ್.ಬಸವರಾಜ, ಗಣಪತಿ ಬಿರಾದರ, ಮೇಟಿ ಮಹೇಶ್ವರ, ಸದಾಶಿವ ಮೇತ್ರೆ ಅವರನ್ನು ಸನ್ಮಾನಿಸಲಾಯಿತು.ಲೋಕನಾಥ ಚಾಂಗಲೇರಾ, ರಾಜಕುಮಾರ ಹೂಗಾರ, ಸಂಗಯ್ಯಾ ಸ್ವಾಮಿ ವಚನ ಸಂಗೀತ ನಡೆಸಿಕೊಟ್ಟರು. ವಕೀಲ ವೈಜಿನಾಥ ಸಿರ್ಸಗಿ ಸ್ವಾಗತಿಸಿ, ಆಕಾಶವಾಣಿಯ ನವಲಿಂಗ ಪಾಟೀಲ ನಿರೂಪಿಸಿ, ಅಶೋಕ ರಾಜೋಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.