ADVERTISEMENT

ಸಮಾನತೆಯ ಹರಿಕಾರ ಡಾ. ಅಂಬೇಡ್ಕರ್

ಖತಗಾಂವ್‌ ಗ್ರಾಮದಲ್ಲಿ ಡಾ.ಅಂಬೇಡ್ಕರ್‌ ಜಯಂತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:14 IST
Last Updated 19 ಏಪ್ರಿಲ್ 2017, 4:14 IST
ಕಮಲನಗರ: ಭಾರತ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವಾದ ಜೀವನ ನಡೆಸಲು ಸಾಧ್ಯವಾಗಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಮಾನತೆಯ ಹರಿಕಾರರು ಎಂದು ಶಾಸಕ ಪ್ರಭು ಚವಾಣ್‌ ಹೇಳಿದರು.
 
ಸಮೀಪದ ಖತಗಾಂವ್‌ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 
ಅಂಬೇಡ್ಕರ್‌ ಅವರ ತತ್ವಗಳು ಒಂದು ಜಾತಿ ಮತ್ತು ವರ್ಗಕ್ಕೆ ಸೀಮಿತವಾಗಿರದೇ, ಶೋಷಿತರ ಧ್ವನಿಯಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಕಳಕಳಿಯನ್ನು ಹೊಂದಿದ್ದವು. ಅವರ ತತ್ವಗಳು ಇಂದಿನ ಪೀಳಿಗೆಯವರಿಗೆ ದಾರಿದೀಪವಾಗಿವೆ ಎಂದರು.
 
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನೀಲಕಂಠರಾವ ಕಾಂಬಳೆ ಮಾತನಾಡಿ, ಸಮಾಜದಲ್ಲಿ ಬೇರುಬಿಟ್ಟಿರುವ ಕಂದಾಚಾರ, ಮೂಢನಂಬಿಕೆಗಳು ಮತ್ತು ಜಾತಿ ಪದ್ಧತಿ ವಿರುದ್ಧ ಯುವಕರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಅಂಬೇಡ್ಕರ್‌ ಅವರ ಜಯಂತ್ಯುತ್ಸವ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
 
ಎ.ಪಿ.ಎಂ.ಸಿ ಸದಸ್ಯ ಅರಹಂತ ಸಾವಳೆ ಮಾತನಾಡಿ, ಡಾ.ಅಂಬೇಡ್ಕರ್‌ ಕೇವಲ ಕೆಳವರ್ಗದ ಜನರ ನಾಯಕರಾಗಿರದೇ, ಎಲ್ಲ ದೇಶಬಾಂಧವರ ಬಗ್ಗೆ ಕಳಕಳಿ ಹೊಂದಿದ ಮಹಾನ್‌ ವ್ಯಕ್ತಿಯಾಗಿದ್ದರು ಎಂದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿರಾವ್‌ ಚವಾಣ್‌, ಮುಖಂಡ ದೇವಾನಂದ ಪಾಟೀಲ, ನಾಗೇಶ್‌ ಪತ್ರೆ, ಬಸವರಾಜ ಪಾಟೀಲ, ಪ್ರಮೋದ್‌ ಧರಣೆ, ಸೈಯದ್‌ ಮೂಸಾ, ಸೂರ್ಯಕಾಂತ ಧರಣೆ, ಮಹಾದೇವ ಬಿರಾದಾರ್‌, ಗಣೇಶ ಕಾರೆಗಾವೆ, ದಯಾನಂದ ಹಲ್ಮಂಡಗೆ ಇದ್ದರು.ದಿಶಾರಾಣಿ ಉತ್ತಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ತ್ರಿಂಬಕ್‌ ಸ್ವಾಗತಿಸಿದರು. ಗೌತಮ ಶಿಂಧೆ ನಿರೂಪಿಸಿದರು. ಗಣೇಶ ಶಿಂಧೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.