ADVERTISEMENT

ಸೀಮಿನಾಗನಾಥ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:30 IST
Last Updated 6 ನವೆಂಬರ್ 2017, 5:30 IST

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ(ಬಿ) ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸೀಮಿನಾಗನಾಥ ದೇವರ ರಥೋತ್ಸವ ಭಾನುವಾರ ಸಂಭ್ರಮ ಸಡಗರದಿಂದ ನೆರವೇರಿತು. ಶನಿವಾರ ರಾತ್ರಿ ನಡೆದ ದೇವರ ಪಲ್ಲಕ್ಕಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪಲ್ಲಕ್ಕಿಯು ದೇವಸ್ಥಾನದ ಸುತ್ತ ಐದು ಬಾರಿ ಪ್ರದಕ್ಷಿಣೆ ಹಾಕಿ ಭಾನುವಾರ ನಸುಕಿನ ಜಾವ ರಥ ಮೈದಾನ ಪ್ರವೇಶಿಸಿತು. ರಥ ಮೈದಾನದಲ್ಲಿ ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನ ಸಹಸ್ರಾರು ಭಕ್ತರ ಕಣ್ಮನ ಸೆಳೆದವು. ಈ ಮಧ್ಯ ನೆರೆದಿದ್ದ ಭಕ್ತರು ದೇವರ ಜಯ ಘೋಷಣೆ ಕೂಗಿ, ಬಾಳೆ ಹಣ್ಣು, ಖಾರಿಕ್‌, ಕಲ್ಲು ಸಕ್ಕರೆ ಮೊದಲಾದ ಸಿಹಿ ಪದಾರ್ಥಗಳನ್ನು ರಥದತ್ತ ಎಸೆದು ಹರಕೆ ತೀರಿಸಿದರು.

ಗ್ರಾಮದ ಚಿಕ್ಕಮಠದ ಪಂಡಿತಾರಾಧ್ಯ ಸ್ವಾಮೀಜಿ ಅವರು ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ಕುಳಿತ ನಂತರ ರಥೋತ್ಸವ ಆರಂಭಗೊಂಡಿತು. ಡೊಳ್ಳು ಕುಣಿತ, ಬ್ರಾಸ್‌ ಬ್ಯಾಂಡ್, ಕರಡಿ ಮಜಲು, ಭಜನೆ ತಂಡ, ಶಾಲಾ ಮಕ್ಕಳ ಕೋಲಾಟ, ಪುರವಂತಿಕೆ ನೃತ್ಯ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ADVERTISEMENT

ಒಂದುದಿನ ಮುಂಚಿತವಾಗಿಯೇ ಬಂದಿದ್ದ ಮಹಾರಾಷ್ಟ್ರ ಮತ್ತು ತೆಲಂಗಾಣ ಭಕ್ತರು ರಥೋತ್ಸವ ವೀಕ್ಷಣೆಗಾಗಿ ದೇವಸ್ಥಾನ ಚಾವಣಿ ಮತ್ತು ಮರಗಿಡಗಳನ್ನು ಹತ್ತಿ ರಥೋತ್ಸವ ವೀಕ್ಷಿಸಿದರು. ಮಧ್ಯಾಹ್ನ ನಡೆದ ಜಂಗಿ ಕುಸ್ತಿಯಲ್ಲಿ ರಾಜ್ಯದ ವಿಜಯಪುರ, ಬೆಳಗಾವಿ ಮಾತ್ರವಲ್ಲದೇ ವಿವಿಧ ರಾಜ್ಯಗಳ ಪೈಲ್ವಾನರು ಗ್ರಾಮದ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಸದಸ್ಯೆ ಸುನೀತಾ ಸಗರ್, ತಹಶೀಲ್ದಾರ್‌ ಡಿ.ಎಂ.ಪಾಣಿ, ಪ್ರಮುಖ ಅರ್ಚಕ ಅಶೋಕಸ್ವಾಮಿ ಹಾಲಾ, ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಪ್ರಭಾ, ದೇವಸ್ಥಾನ ಮಂಡಳಿ ಪ್ರಮುಖ ರಾದ ಕೇಶವರಾವ ತಳಘಟಕರ್‌, ಮಹಾಂತಯ್ಯ ತೀರ್ಥ, ಪುರಸಭೆ ಅಧ್ಯಕ್ಷ ಯೂಸೂಫ್‌ ಸೌದಾಗರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.