ಬೀದರ್: ಪ್ರತಿಯೊಬ್ಬರು ಇಂದು ತುರ್ತು ಹಾಗೂ ಅಗತ್ಯ ಮಾಹಿತಿಗೆ ವಿಕಿಪಿಡಿಯಾದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭಿಸುವಂತಾಗಲು ಸ್ಥಳೀಯರು ವಿಕಿಪಿಡಿಯಾದಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ವಿಕಿಪಿಡಿಯಾದ ಸಂಚಾಲಕ ಓಂಶಿವಪ್ರಕಾಶ ಹೇಳಿದರು.
ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಹಾಗೂ ಮಳಿಯಾಳಿಯಲ್ಲಿ ಮಾತ್ರ ಹೆಚ್ಚು ಮಾಹಿತಿ ಲಭ್ಯ ಇದೆ. ಕನ್ನಡದಲ್ಲೂ ಎಲ್ಲ ಬಗೆಯ ಹಾಗೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಇನ್ನು ಸಾಕಷ್ಟು ಕಾರ್ಯ ಆಗಬೇಕಿದೆ. ಅಂಗೈಯಲ್ಲಿ ಮಾತೃ ಭಾಷೆಯಲ್ಲೇ ಎಲ್ಲ ಬಗೆಯ ಮಾಹಿತಿ ದೊರೆಯುವಂತಾಗಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಹೇಳಿದರು.
ವಿಕಿಪಿಡಿಯಾದಲ್ಲಿ ಎಲ್ಲ ಸಂದರ್ಭದಲ್ಲೂ ಹೆಚ್ಚಿನ ಮಾಹಿತಿ ಸೇರಿಸುವ, ತಪ್ಪು ಮಾಹಿತಿ ತೆಗೆದು ಹಾಕುವ ಹಾಗೂ ವ್ಯಾಕರಣವನ್ನೂ ಸರಿಪಡಿಸುವ ಅವಕಾಶ ಇರುತ್ತದೆ. ಒಂದೇ ವಿಷಯದ ಬಗೆಗೆ ಹೆಚ್ಚು ಜನರು ಮಾಹಿತಿ ಹಂಚಿಕೊಳ್ಳುವುದರಿಂದ ಅಪ್ಲೋಡ್ ಮಾಡುವುದರಿಂದ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ತಿಳಿಸಿದರು.
ವನ್ಯಜೀವಿ ಛಾಯಾಗ್ರಾಹಕರು ಸಹ ಅಪರೂಪದ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ತಮ್ಮ ಹೆಸರಿನಲ್ಲೇ ವಿಕಿಪಿಡಿಯಾದಲ್ಲಿ ಅಪ್ಲೋಡ್ ಮಾಡಬಹುದು. ವಿಕಿಪಿಡಿಯಾ ವೀಕ್ಷಿಸುವ ಪಕ್ಷಿತಜ್ಞರು ಅವುಗಳ ಬಗೆಗೆ ಉಲ್ಲೇಖಿಸುವುದರಿಂದ ಅಲ್ಲಿ ಮಾಹಿತಿ ಹಂಚಿಕೊಳ್ಳುವ ಸಮೂಹವೇ ನಿರ್ಮಾಣವಾಗುತ್ತದೆ. ಎಲ್ಲ ವಯೋಮಾನವದವರೂ ಪಕ್ಷಿಗಳ ಬಗೆಗೆ ಚಿತ್ರ ಸಹಿತ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.