ADVERTISEMENT

₹22 ಕೋಟಿ ಯೋಜನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:29 IST
Last Updated 24 ಏಪ್ರಿಲ್ 2017, 6:29 IST

ಹುಮನಾಬಾದ್: ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿ ತಂದ ₹22 ಕೋಟಿ ಅನುದಾನವನ್ನು ಅವಶ್ಯಕತೆ ಆಧರಿಸಿ, ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಕರ್ನಾಟಕ ಭೂಸೇನಾ ನಿಗಮ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಭಾನುವಾರ ನಡೆದ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿ ಸಭೆಯಲ್ಲಿ ಅವರು ಮಾತನಾಡಿದರು.

‘ರಸ್ತೆ ಡಾಂಬರೀಕರಣ, ಸಿಮೆಂಟ್‌ ರಸ್ತೆ, ಚರಂಡಿ, ಶಾಲಾ ಕೋಣೆ ಹಾಗೂ ಶೌಚಾಲಯ ನಿರ್ಮಾಣ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣಕ್ಕೆ ಅನುದಾನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹಿಂದೆ ಕೈಗೊಳ್ಳಲಾದ ಮಾರ್ಗದಲ್ಲೇ ಪುನಃ ರಸ್ತೆ ಕಾಮಗಾರಿ ಕೈಗೊಳ್ಳದೇ ಹೊಸ ಮಾರ್ಗಗಳಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಗಡವಂತಿ ಗ್ರಾಮದಲ್ಲಿ ವಾಲಿಬಾಲ್‌ ಕ್ರೀಡಾಂಗಣ, ಹುಮನಾಬಾದ್ ಬಾಲಕರ ಪದವಿಪೂರ್ವ ಕಾಲೇಜಿಗೆ ಎರಡು ವರ್ಗಕೋಣೆ ಮತ್ತು ಶೌಚಾಲಯ ನಿರ್ಮಿಸಲು ಅನುದಾನ ನಿಗದಿಪಡಿಸಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬಸವಕಲ್ಯಾಣ ತಾಲ್ಲೂಕಿನ ಮುಡಬಿ–ಮಂಗಳೂರು ರಸ್ತೆ ಅಭಿವೃದ್ಧಿ, ಜೊತೆಗೆ ಲಿಂಗದಳ್ಳಿ ಮತ್ತು ಸದಲಾಪೂರ ಗ್ರಾಮಗಳಲ್ಲಿ ತಲಾ ಒಂದು ಕೊಳವೆಬಾವಿ ಕೊರೆಸಲು ನಿರ್ಧರಿಸಲಾಗಿದೆ. ಮಾಶಾಳ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ನಿಗದಿ ಮಾಡಲಾಗಿದೆ’ ಎಂದು ವಿವರಿಸಿದರು.

ಹಳ್ಳಿಖೇಡ (ಬಿ) ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ತೀರಾ ಅನಿವಾರ್ಯ ಇರುವೆಡೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಡಾಕುಳಗಿ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೂ ಅನುದಾನ ನಿಗದಿಪಡಿಸಲಾಗಿದೆ’ ಎಂದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಹುಮನಾಬಾದ್‌ ತಹಶೀಲ್ದಾರ್‌ ಡಿ.ಎಂ.ಪಾಣಿ, ಬಸವಕಲ್ಯಾಣ ತಹಶೀಲ್ದಾರ್‌ ಕೀರ್ತಿ, ಕೆಆರ್‌ಐಡಿಎಲ್‌ ಎಇಇ ರಘುನಾಥ ಘಂಟೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗೋವಿಂದ ಸೇರಿದಂತೆ ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದ್ದರು.

***

ತಹಶೀಲ್ದಾರ್‌ ಒಳಗೊಂಡಂತೆ ಮಹತ್ವದ ಜವಾಬ್ದಾರಿವುಳ್ಳ ಇತರೆ ಇಲಾಖೆ ಅಧಿಕಾರಿಗಳು ತಮ್ಮ ಸ್ಥಾನದ ಘನತೆಯನ್ನು ಅರಿತು, ಕಾರ್ಯ ನಿರ್ವಹಿಸಬೇಕು.
-ರಾಜಶೇಖರ ಬಿ.ಪಾಟೀಲ, ಅಧ್ಯಕ್ಷ, ಕೆಆರ್ಐಡಿಎಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.