ADVERTISEMENT

ಸಿರಿಧಾನ್ಯಗಳ ‘ಸೂಪ್‌’ಗೆ ಮಾರುಹೋದ ಸಾಹಿತ್ಯಾಸಕ್ತರು!

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:27 IST
Last Updated 24 ಜನವರಿ 2018, 10:27 IST

ಬೀದರ್: ಬೀದರ್ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಸಿರಿಧಾನ್ಯಗಳ ‘ಸೂಪ್’ ಸ್ವಾದಕ್ಕೆ ಮಾರು ಹೋದರು.
ಸಮ್ಮೇಳನ ಪ್ರಯುಕ್ತ ಜಿಲ್ಲಾ ರಂಗಮಂದಿರದಲ್ಲಿ ಸಂಗಪ್ಪ ಹಿಪ್ಪಳಗಾಂವ್ ಅವರು ತೆರೆದಿದ್ದ ಸಿರಿಧಾನ್ಯಗಳ ಮಳಿಗೆಯಲ್ಲಿ ಸಾಹಿತ್ಯಾಸಕ್ತರು ದುಡ್ಡು ಕೊಟ್ಟು ಸೂಪ್ ಕುಡಿದರು.

ಸಂಗಪ್ಪ ಅವರು 500 ಲೋಟಗಳಷ್ಟು ಸಿರಿಧಾನ್ಯಗಳ ಗಂಜಿ ಸಿದ್ಧಪಡಿಸಿಕೊಂಡು ಬಂದಿದ್ದರು. ಮಳಿಗೆ ಮೇಲೆ ‘ಸಿರಿಧಾನ್ಯಗಳ ಸೂಪ್‌ (ಗಂಜಿ)’ ಲಭ್ಯ ಇದೆ ಎಂದು ಬರೆಸಿದ್ದರು. ₹10ಗೆ ಒಂದು ಲೋಟ ಮಾರಾಟ ಮಾಡಿದರು.

ಸಿರಿಧಾನ್ಯಗಳ ಮಳಿಗೆಗೆ ಭೇಟಿ ನೀಡಿದವರಲ್ಲಿ ಬಹುತೇಕರು ಸಿರಿಧಾನ್ಯಗಳ ಸೂಪ್ ಹೆಸರಿನ ಗಂಜಿ ಬಗೆಗೆ ಕೇಳಿ ತಿಳಿದುಕೊಂಡರು. ತಲಾ ಒಂದು, ಎರಡು ಲೋಟ ಗಂಜಿ ಸವಿದರು. ಅಷ್ಟು ಮಾತ್ರವಲ್ಲ, ಸ್ನೇಹಿತರು, ಸಂಬಂಧಿಕರನ್ನೂ ಕರೆ ತಂದು ಕುಡಿಸಿದರು.

ADVERTISEMENT

‘ನವಣೆ, ಶ್ಯಾವಿ ಹಿಟ್ಟು, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಜೀರಿಗೆ ಬಳಸಿ ಸಿರಿಧಾನ್ಯಗಳ ಸೂಪ್(ಗಂಜಿ) ತಯಾರಿಸಲಾಗಿದೆ. ಸಾಹಿತ್ಯ ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರುವ ದಿನಗಳಲ್ಲಿ ನಗರದಲ್ಲಿ ಸಿರಿಧಾನ್ಯಗಳ ಸೂಪ್(ಗಂಜಿ) ಮಳಿಗೆ ತೆರೆಯುವ ಉದ್ದೇಶ ಇದೆ’ ಎಂದು ದಕ್ಷಿಣ ಭಾರತ ನೈಸರ್ಗಿಕ ರೈತ ಉತ್ಪಾದನಾ ಕಂಪನಿ ನಿಯಮಿತದ ಸಂಗಪ್ಪ ಹಿಪ್ಪಳಗಾಂವ್ ತಿಳಿಸಿದರು.

ಮಳಿಗೆಯಲ್ಲಿ ಬಂಜೆತನಕ್ಕೆ ಔಷಧವಾಗಿರುವ ಶ್ಯಾವಿ, ಕೀಲು ನೋವು ನಿವಾರಿಸುವ ನವಣೆ, ರಕ್ತ ಶುದ್ಧೀಕರಿಸುವ ಆರ್ಕ್, ಕಿಡ್ನಿ ಹರಳು ಕರಗಿಸುವ ಊದಲು, ಅತಿಹೆಚ್ಚು ನಾರಿನಾಂಶ ಹೊಂದಿರುವ ಕೂರ್ಲೆ ಸಿರಿಧಾನ್ಯಗಳು ಇದ್ದವು.

ಸಮ್ಮೇಳನದಲ್ಲಿ ಹುಗ್ಗಿ

ಬೀದರ್: ಬೀದರ್ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವೆಯಲ್ಲಿ ಸಿದ್ಧಪಡಿಸಿದ ಬಿಸಿ ಬಿಸಿ ಹುಗ್ಗಿ ಸಾಹಿತ್ಯ ಆಸಕ್ತರ ಪ್ರಶಂಸೆಗೆ ಪಾತ್ರವಾಯಿತು.

ಗೋಡಂಬಿ ಹಾಕಿ ತಯಾರಿಸಿದ ರುಚಿಯಾದ ಹುಗ್ಗಿ ಸವಿದ ಕನ್ನಡಾಭಿಮಾನಿಗಳು ‘ಹುಗ್ಗಿ ಭಾಳ್ ಛಂದ್ ಆಗ್ಯಾದ್ರಿ’ ಎಂದು ಉದ್ಗರಿಸಿದರು. ಉಳಿದಂತೆ ಊಟದಲ್ಲಿ ಅನ್ನ, ಸಾಂಬಾರು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.