ADVERTISEMENT

‘ಮುಸ್ಲಿಂ ವಿರೋಧಿಯೆಂಬ ಅಪಪ್ರಚಾರ ಸಲ್ಲ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:56 IST
Last Updated 20 ಫೆಬ್ರುವರಿ 2018, 8:56 IST

ಔರಾದ್: ‘ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಶಿಕ್ಷಕ ಸಂಜುಕುಮಾರ ಮಾನುರೆ ಹೇಳಿದರು. ತಾಲ್ಲೂಕು ಆಡಳಿತ ಸೋಮವಾರ ಇಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಶಿವಾಜಿ ಮಹಾರಾಜರು ಶಿಷ್ಟರ ರಕ್ಷಕ. ದುಷ್ಟರ ಸಂಹಾರಕರು. ಅವರು ತಮ್ಮ ಆಡಳಿತ, ಸೈನ್ಯದಲ್ಲಿ ಮುಸ್ಲಿಂ ಯುವಕರನ್ನು ಸೇರಿಸಿಕೊಂಡಿದ್ದರು’ ಎಂದು ಹೇಳಿದರು.

‘ಶಿವಾಜಿ ಸಾಧನೆ ಹಿಂದೆ ಅವರ ತಾಯಿ ಜೀಜಾಬಾಯಿ ಅವರ ಪ್ರೇರಣೆ ಬಹಳ ಮುಖ್ಯವಾಗಿದೆ. ತಾಯಿ ಜೀಜಾಬಾಯಿ ಶಿವಾಜಿಗೆ ಉತ್ತಮ ಸಂಸ್ಕಾರ ಜತೆಗೆ ಮಹಾಪುರುಷರ ಆದರ್ಶ ಕಲಿಸಿಕೊಟ್ಟಿದ್ದರು. ಈ ಕಾರಣ ಇಂದು ಶಿವಾಜಿ ಸಾಧನೆ ಇತಿಹಾಸ ಪುಟಗಳಲ್ಲಿ ಕಾಣಬಹುದು’ ಅವರು ಎಂದು ಹೇಳಿದರು.

ADVERTISEMENT

ಶಾಸಕ ಪ್ರಭು ಚವಾಣ್ ಮಾತ ನಾಡಿ, ‘ಛತ್ರಪತಿ ಶಿವಾಜಿ ಅಪ್ರತಿಮ ಹೋರಾಟಗಾರ. ತನ್ನ ಸ್ವಂತ ಸಾಮರ್ಥ್ಯ ದಿಂದ ರಾಜ್ಯ ಸ್ಥಾಪಿಸಿದವರು. ಅವರ ದೇಶಭಕ್ತಿ ಇಂದಿನ ಯುವಕರು ಬೆಳೆಸಿಕೊಳ್ಳಬೇಕು’ ಎಂದರು.

‘ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಶಿವಾಜಿ ಮಹಾರಾಜರ ಜಯಂತಿ ಆಚರಣೆಗೆ ಚಾಲನೆ ಸಿಕ್ಕಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಮರಾಠಾ ಸಮುದಾಯ 2ಎಗೆ ಸೇರಿಸಲು ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಸಮಾಜ 2ಎಗೆ ಸೇರಿಸಲು ಈಗಾಗಲೇ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆರಾದ ಗೀತಾ ಚಿದ್ರಿ, ಮೀನಾ ಮಾಣಿಕ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ, ಉಪಾಧ್ಯಕ್ಷ ನೆಹರು ಪಾಟೀಲ, ಸುರೇಖಾ ಭೋಸ್ಲೆ, ಮಾರುತಿ ಚವಾಣ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ನಿರ್ಮಳೆ, ಸಿಪಿಐ ರಮೇಶಕುಮಾರ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಶಾಸಕ ಪ್ರಭು ಚವಾಣ್, ಕಾಂಗ್ರೆಸ್ ಧುರೀಣ ಲಕ್ಷ್ಮಣರಾವ ಸೋರಳಿಕರ್, ರಾಮಣ್ಣ ಒಡೆಯರ್, ಭೀಮಸೇನ ಸಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.