ADVERTISEMENT

ಭಾಲ್ಕಿ: ಆರನೇ ತಾಲ್ಲೂಕು ನುಡಿ ಜಾತ್ರೆ ಇಂದು

ಹಲಬರ್ಗಾ: ಸರ್ವಾಧ್ಯಕ್ಷರ ಮೆರವಣಿಗೆಗೆ ಮೆರಗು ನೀಡಲಿರುವ ಕಲಾ ತಂಡಗಳು

ಬಸವರಾಜ ಎಸ್.ಪ್ರಭಾ
Published 25 ಫೆಬ್ರುವರಿ 2023, 5:53 IST
Last Updated 25 ಫೆಬ್ರುವರಿ 2023, 5:53 IST
ವಿಕ್ರಮ ವಿಸಾಜಿ
ವಿಕ್ರಮ ವಿಸಾಜಿ   

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠದಲ್ಲಿ ಶನಿವಾರ ನಡೆಯಲಿರುವ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ನಾಡಧ್ವಜಗಳು ರಾರಾಜಿಸುತ್ತಿವೆ.

ರಾಚೋಟೇಶ್ವರ ಮಠದ ಸಭಾ ಭವನದಲ್ಲಿ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದ ಲಿಂ.ಅಶೋಕ ಮೈನಾಳೆ ಅವರ ಹೆಸರಿನಲ್ಲಿ ವೇದಿಕೆ ನಿರ್ಮಿಸಲಾಗಿದೆ.

ಮಂಟಪವನ್ನು ಖ್ಯಾತ ವೈದ್ಯರಾಗಿದ್ದ ಲಿಂ.ಡಾ.ವಿಶ್ವನಾಥ ಪ್ರಭಾ ಅವರ ಹೆಸರಿನಲ್ಲಿ, ಮಹಾದ್ವಾರವನ್ನು ಪ್ರಖ್ಯಾತ ಆಯುರ್ವೇದಿಕ ವೈದ್ಯ ಲಿಂ.ಓಂಕಾರ ಸ್ವಾಮಿ, ಪ್ರಮುಖರಾಗಿದ್ದ ಲಿಂ.ಕಾಶಪ್ಪಾ ಪಾಟೀಲ ತೇಗಂಪೂರ ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ.

ADVERTISEMENT

ಸಮ್ಮೇಳನದ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 8.30ಕ್ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಪ್ರಮುಖ ವೃತ್ತಗಳ ಮೂಲಕ ತಾಯಿ ಭುವನೇಶ್ವರ ಭಾವಚಿತ್ರ ಮತ್ತು ಸರ್ವಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಜಾನಪದ, ಡೊಳ್ಳು ಕುಣಿತ ಸೇರಿದಂತೆ ಇತರ ಕಲಾ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಲಿವೆ.

ಡಿವೈಎಸ್ಪಿ ಪೃಥ್ವಿಕ ಶಂಕರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ.

ಸ್ಮರಣ ಸಂಚಿಕೆ ಬಿಡುಗಡೆ: ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಾಡು, ನುಡಿ, ಸಂಸ್ಕೃತಿ, ಪರಂಪರೆ ಒಳಗೊಂಡಂತೆ ಇತರ ವಿಷಯಗಳ ಕುರಿತು ಸಾಹಿತ್ಯಾಸಕ್ತರಿಂದ ಆಹ್ವಾನಿಸಿದ್ದ ಕವನ, ಲೇಖನಗಳ ಸಂಗ್ರಹದ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ನುಡಿ ಜಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಸಾಹಿತ್ಯಾಭಿಮಾನಿಗಳಿಗೆ ರಾಚೋಟೇಶ್ವರ ಶ್ರೀಮಠದ ವತಿಯಿಂದ ಹುಗ್ಗಿ, ಅನ್ನ, ಸಾಂಬಾರ ವ್ಯವಸ್ಥೆ ಮಾಡಲಾಗಿದೆ.

‘ಸಮ್ಮೇಳನದಲ್ಲಿ ಎರಡು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ‘ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.