ADVERTISEMENT

ಅಕ್ರಮ ಮದ್ಯದಂಗಡಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 7:16 IST
Last Updated 2 ಅಕ್ಟೋಬರ್ 2014, 7:16 IST

ಗುಂಡ್ಲುಪೇಟೆ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ಮದ್ಯದಂಗಡಿಗಳ ತೆರವಿಗೆ ಒತ್ತಾಯಿಸಿ ಬುಧವಾರ ಸೋಷೀಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾದಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಎನ್‌. ಆರ್‌ ವೈನ್ಸ್‌ ಮತ್ತು ಶ್ರೀರಾಮ ವೈನ್ಸ್‌ ಎಂಬ ಹೆಸರಿನ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಎರಡೂ ಅಂಗಡಿಗಳು ಮಸೀದಿಯ ಬಳಿ ಕೇವಲ 50 ರಿಂದ 70 ಮೀಟರ್‌ ಅಂತರದಲ್ಲಿವೆ. ಕರ್ನಾಟಕ ಅಬಕಾರಿ ಕಾಯ್ದೆ 1967ರ ನಿಯಮ 5 ರ ಅನ್ವಯ ಧಾರ್ಮಿಕ ಸ್ಥಳ, ಪ್ರಾರ್ಥನಾ ಸ್ಥಳ, ಶಾಲಾ ಕಾಲೇಜುಗಳು, ಆಸ್ಪತ್ರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಂದ 100 ಮೀಟರ್‌ ಹೊರಗಿರಬೇಕು.

ಈ ನಿಯಮಗಳನ್ನು ಗಾಳಿಗೆ ತೂರಿರುವ ಸದರಿ ಅಂಗಡಿಗಳ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು. ತಾಲ್ಲೂಕು ಕಚೇರಿ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿ ಅಬಕಾರಿ ನಿರೀಕ್ಷಕಿ ಗೀತಾ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಗೀತಾ ಅವರು ಅ.15 ರಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ  ಅರಿಫ್‌ ಸಾಬ್‌, ಉಪಾಧ್ಯಕ್ಷ ಸಮೀವುಲ್ಲಾಖಾನ್‌, ಪ್ರಧಾನ ಕಾರ್ಯದರ್ಶಿ  ಅಬ್ರಾರ್‌ ಅಹಮದ್‌, ತಾಲ್ಲೂಕು ಘಟಕದ ಅಧ್ಯಕ್ಷ ಮುಬಾರಕ್‌ ನಖ್ವಿ, ಉಪಾಧ್ಯಕ್ಷ ಸರ್ಫರಾಜ್‌ ಅಹಮದ್‌, ರಹಮತ್‌, ಕಲೀಲ್‌, ಕಿಜರ್‌, ಇರ್‌ಫಾತ್‌, ಮಹೇಶ್‌, ಇಮ್ರಾನ್‌  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.