ADVERTISEMENT

ಕೃಷಿಯಿಂದ ರೈತರು ವಿಮುಖ: ಕಳವಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 8:39 IST
Last Updated 24 ಡಿಸೆಂಬರ್ 2017, 8:39 IST
ಗುಂಡ್ಲುಪೇಟೆ ಕೃಷಿ ಇಲಾಖೆ ವತಿಯಿಂದ ನಡೆದ ರೈತದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ರೈತ ಉಡೀಗಾಲ ಮಾದೇಶ್ ಉದ್ಘಾಟಿಸಿದರು
ಗುಂಡ್ಲುಪೇಟೆ ಕೃಷಿ ಇಲಾಖೆ ವತಿಯಿಂದ ನಡೆದ ರೈತದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ರೈತ ಉಡೀಗಾಲ ಮಾದೇಶ್ ಉದ್ಘಾಟಿಸಿದರು   

ಗುಂಡ್ಲುಪೇಟೆ: ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ದೊರಕಿದಾಗ ಮಾತ್ರ ರೈತರು ನೆಮ್ಮದಿ ಬದುಕು ನಡೆಸಲು ಸಾಧ್ಯ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸಂಪತ್ತು ಅಭಿಪ್ರಾಯಪಟ್ಟರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಇಲಾಖೆ ಮತ್ತು ರೈತ ಸಂಘಟನೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿ, ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಷ್ಟಕ್ಕೆ ಹವಾಮಾನ ವೈಪ್ಯರೀತ್ಯ ಕಾರಣ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸರ್ಕಾರ ಮುಂದಾಗಬೇಕು ಎಂದರು.

ADVERTISEMENT

ರೈತರು ಕೃಷಿಯಲ್ಲಿ ಹಳೆಯ ಪದ್ಧತಿಗಳ ಜೊತಗೆ ಆಧುನಿಕ ಪದ್ಧತಿಗಳನ್ನು ಆಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರದ ಮೊರೆ ಹೋಗದೆ ಸಾವಯವ ಗೊಬ್ಬರಗಳಿಂದ ಬೆಳೆ ಬೆಳೆಯಿರಿ ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ಉಡೀಗಾಲ ಮಾದೇಶ್ ಮಾತನಾಡಿ, ನೀರಿನ ದುರ್ಬಳಕೆ, ರಾಸಾಯನಿಕಗಳ ಬಳಕೆಯಿಂದ ಭೂಫಲವತ್ತತೆ ಕಡಿಮೆಯಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅನೇಕರು ಕೃಷಿಯಿಂದ ವಿಮುಖರಾಗುವ ಚಿಂತನೆಯಲ್ಲಿದ್ದಾರೆ ಎಂದರು.

ಸಾವಯವ ಕೃಷಿಯತ್ತ ಮರಳದಿದ್ದರೆ ಮುಂದಿನ ದಿನಗಳಲ್ಲಿ ರೈತ ಸಂಕುಲ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರವಾಸಗಳ ಮೂಲಕ ಹೆಚ್ಚಿನ ಅನುಭವ ಪಡೆದು, ಸ್ವಾವಲಂಬಿಗಳಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎನ್.ನಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ.ಬೊಮ್ಮಯ್ಯ, ಪಿ.ಚನ್ನಪ್ಪ. ಅಶ್ವಿನಿ ವಿಶ್ವನಾಥ್, ಕೃಷಿ ಸಹಾಯಕ ನಿರ್ದೇಶಕ ಸಿದ್ದೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಕೆ.ಎಂ.ನಾಗಮಲ್ಲಪ್ಪ ಸೇರಿದಂತೆ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.