ಚಾಮರಾಜನಗರ: ‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗುರುಸ್ವಾಮಿ ಅವರು ಯಾವಾಗ ಬೆನ್ನಿಗೆ ಚೂರಿ ಹಾಕುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಅವರು ಈ ಹಿಂದೆ ಬಿಜೆಪಿಯಲ್ಲಿದ್ದಾಗ ಮಲ್ಲಿಕಾರ್ಜುನಪ್ಪ ಅವರ ಸೋಲಿಗೆ ಕಾರಣರಾಗಿದ್ದರು. ಶಾಸಕ ಪುಟ್ಟರಂಗಶೆಟ್ಟರೇ, ಅವರೀಗ ನಿಮ್ಮ ಪಕ್ಷದಲ್ಲಿ ಇದ್ದಾರೆ. ಎಚ್ಚರವಾಗಿರಿ’ ಎಂದು ಬಿಜೆಪಿ ಮುಖಂಡ ವಿಜಯ್ಕುಮಾರ್ ವ್ಯಂಗ್ಯವಾಡಿದರು.
‘ಗುರುಸ್ವಾಮಿ ಅವರು ಮೊದಲು ಜೆಡಿಎಸ್ನಲ್ಲಿದ್ದರು. ಬಳಿಕ ಕೆಜೆಪಿ, ಬಿಜೆಪಿಗೆ ಹೋಗಿ ಈಗ ಕಾಂಗ್ರೆಸ್ಗೆ ಹೋಗಿದ್ದಾರೆ. ಅವರೊಬ್ಬ ಅವಕಾಶವಾದಿ. ಅವರಿಗೆ ಬಿಜೆಪಿ ಮುಖಂಡ ಮಲ್ಲೇಶ್ ಅವರ ವಿರುದ್ಧ ಮಾತನಾಡಲು ಯಾವ ಯೋಗ್ಯತೆ ಇದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮಲ್ಲೇಶ್ ಅವರು ಡೋಂಗಿ, ಸುಳ್ಳು ಹೇಳುತ್ತಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆಲ್ಲ ಗುರುಸ್ವಾಮಿ ಅವರು ಮಾಧ್ಯಮದ ಮುಂದೆ ಹೇಳಿದ್ದಾರೆ. ಈ ರೀತಿ ಹೇಳಲು ಅವರಿಗೆ ನೈತಿಕತೆಯಿಲ್ಲ. ಜಿಲ್ಲೆಯ ಜನರಿಗೆ ಮಲ್ಲೇಶ್ ಅವರ ವ್ಯಕ್ತಿತ್ವ ಏನು ಎಂಬುದು ತಿಳಿದಿದೆ. ಅವರು ಮಾಡಿದ ಹೋರಾಟವನ್ನು ಜನರು ಮರೆತಿಲ್ಲ ಎಂದರು.
ಮಲ್ಲೇಶ್ ಅವರು ರೈತ ಸಂಘದಲ್ಲಿ ಇದ್ದಾಗಲೇ ಎಂಎಲ್ಎ ಆಗುವ ಅರ್ಹತೆ ಹೊಂದಿದ್ದರು. ಹಾಗಾಗಿ, ಅವರು ತಾವು ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಗುರುಸ್ವಾಮಿ ಅವರಿಗೆ ತಾಕತ್ತು ಇದ್ದರೆ ಕಾಂಗ್ರೆಸ್ನಲ್ಲಿ ತಾವು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳಲಿ ಎಂದು ಸವಾಲು ಹಾಕಿದ್ದರು.
ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಮುಖಂಡರು ಒಂದು ವರ್ಷದ ಹಿಂದೆ ಪ್ರಾರಂಭಿಸಿದ ಕಾಮಗಾರಿಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಕಟ್ಟಡಗಳನ್ನು ತೆರವುಗೊಳಿಸುತ್ತೇವೆಂದು ನಗರವನ್ನು ದೂಳಿನ ಕೊಂಪೆ ಮಾಡಿದ್ದಾರೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕುಮಾರ್, ನಾಗೇಂದ್ರ ಪ್ರಸಾದ್, ಬಸವರಾಜು, ಬಸವನಪುರ ರಾಜಶೇಖರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.