ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ಬೆಳಚಲವಾಡಿ ಗ್ರಾಮದಲ್ಲಿ ಸೂಕ್ತ ಒಳಚರಂಡಿ ನಿರ್ವಹಣೆಯಿಲ್ಲದೆ ಮನೆಮುಂದೆ ಕೊಳಚೆ ನೀರು ಹರಿಯುವಂತಾಗಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
‘ಬಹುತೇಕ ಮಣ್ಣಿನ ರಸ್ತೆಗಳಿಂದಲೇ ಕೂಡಿರುವ ಗ್ರಾಮದ ಬೀದಿಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಲಾಗಿಲ್ಲ. ಈ ಬಗ್ಗೆ ಪಂಚಾಯಿತಿಗೆ ಹಲವು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುವುದು ಗ್ರಾಮಸ್ಥರ ದೂರು.
‘ಸ್ವಲ್ಪ ಮಳೆಬಿದ್ದರೂ ಸಹ ಬೀದಿಗಳು ಕೆಸರುಗದ್ದೆಗಳಂತಾಗಿ ಓಡಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಮಳೆಯಿಂದ ಮನೆಗೆ ಚರಂಡಿನೀರು ನುಗ್ಗಿ ತೊಂದರೆಯುಂಟಾಯಿತು. ಬಳಿಕ, ಮನೆಯವರೆಲ್ಲ ಸೇರಿ ಕೊಳಚೆ ನೀರನ್ನು ಹೊರಚೆಲ್ಲುವಂತಾಯಿತು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರುಗಳಿಗೆ ದೂರು ನೀಡಿದ್ದೇನೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮದ ನಿವಾಸಿ ಪಾಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.