ADVERTISEMENT

ಜಿಲ್ಲೆಯ ಹಲವೆಡೆ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:40 IST
Last Updated 2 ಡಿಸೆಂಬರ್ 2017, 8:40 IST

ಚಾಮರಾಜನಗರ: ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಳೆಯಾಗಿದೆ. ಕೆಲವು ದಿನಗಳಿಂದ ಬೆವರಿಳಿಸುತ್ತಿದ್ದ ಸೂರ್ಯನ ತಾಪ, ಗುರುವಾರದಿಂದ ಸಂಪೂರ್ಣ ಮಾಯವಾಗಿದೆ. ಮೋಡ ಆವರಿಸಿದ್ದು, ಕೆಲವು ಸಮಯ ಮಾತ್ರ ಸೂರ್ಯನ ದರ್ಶನವಾಗಿತ್ತು. ಸಂಜೆ ವೇಳೆ ಅಲ್ಲಲ್ಲಿ ತುಂತುರು ಮಳೆಯಾಗಿತ್ತು. ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲ್ಲೂಕಿನಲ್ಲಿ ರಾತ್ರಿ ಉತ್ತಮ ಮಳೆಯಾಗಿದೆ. ಶುಕ್ರವಾರವೂ ಕಾರ್ಮೋಡ ಕವಿದಿದ್ದು, ಮಳೆ ಆಗಾಗ ವಿರಾಮ ನೀಡುತ್ತಾ ಜಿನುಗುಟ್ಟಿದೆ.

ಅತ್ತ ಬಿಸಿಲೂ ಇಲ್ಲದೆ, ಜೋರಾದ ಮಳೆಯೂ ಇಲ್ಲದ ವಾತಾವರಣದಿಂದ ಜನರು ಕಿರಿಕಿರಿ ಅನುಭವಿಸಿದರು. ಚಳಿಯ ವಾತಾವರಣ ಇರುವುದರಿಂದ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಚಾಮರಾಜನಗರ, ಕೊಳ್ಳೇಗಾಲ ನಗರಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯಗಳು ನಡೆಯುತ್ತಿರುವುದರಿಂದ ಪ್ರಮುಖ ಬೀದಿಗಳು ಕೆಸರುಮಯವಾಗಿದೆ. ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡಲು ಹರಸಾಹಸಪಡುವಂತಾಗಿದೆ.

ADVERTISEMENT

ಹನೂರು ಭಾಗದಲ್ಲಿ ಮಳೆ: ಹನೂರು, ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಅಧಿಕ ಮಳೆಯಾಗಿದೆ. ಪಿ.ಜಿ. ಪಾಳ್ಯ ಮತ್ತು ಪೊನ್ನಾಚಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ಮಾರ್ಟಳ್ಳಿ, ಅಗರ, ಕೌದಳ್ಳಿ, ಹೂಗ್ಯಂ, ರಾಮಾಪುರ, ಉತ್ತೂರು, ಲಕ್ಕಿಪುರ, ಹಂಗಳ, ಯರಗನಹಳ್ಳಿ, ಬೊಮ್ಮನಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ ಮತ್ತು ಬೇರಂಬಾಡಿಗಳಲ್ಲಿ ತಲಾ 1 ಸೆಂ.ಮೀ. ಮಳೆ ದಾಖಲಾಗಿದೆ.

ಯಳಂದೂರು ಸುತ್ತಮುತ್ತ ಮಳೆ
ಯಳಂದೂರು: ತಾಲ್ಲೂಕಿನಾದ್ಯಂತ ಓಖಿ ಚಂಡಮಾರುತದ ಪರಿಣಾಮ ಶುಕ್ರವಾರ ಮುಂಜಾನೆಯಿಂದಲೇ ಮಳೆ ಸುರಿಯಿತು. ಬಿಳಿಗಿರಿರಂಗನಬೆಟ್ಟದಲ್ಲಿ ರಾತ್ರಿ ಯಿಂದಲೇ ತುಂತುರು ಮಳೆ ಸುರಿಯಿತು ನಂತರ ಬಿರುಸಾಯಿತು. ಮಧ್ಯಾಹ್ನನದ ನಂತರ ಸುರಿದ ಭಾರಿ ಮಳೆಗೆ ಕೃಷಿಕರು ಮತ್ತು ಸಾರ್ವಜನಿಕರು ಪರದಾಡಿದರು.

ಮಳೆಯಿಂದಾಗಿ ಪಟ್ಟಣದ ಪ್ರಮುಖ ಬಡಾವಣೆಗಳ ರಸ್ತೆ, ಚರಂಡಿ ಗಳಲ್ಲಿ ನೀರು ತುಂಬಿ ಹರಿಯಿತು. ವಿದ್ಯಾರ್ಥಿಗಳು, ಸಾರ್ವಜಿಕರು ಪರದಾ ಡುವಂತಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಬಸ್ ನಿಲ್ದಾಣ ಸೇರಿದಂತೆ ಅಂಗಡಿಗಳ ಮೊರೆ ಹೋದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.