ಯಳಂದೂರು: ‘ವಿಧಾನಸಭಾ ಚುನಾವಣೆಯಲ್ಲಿ ನನ್ನ ಜೊತೆಯಲ್ಲೇ ಇದ್ದ ಪಕ್ಷದ ಕಾರ್ಯಕರ್ತರಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನನಗೆ ಮತ ಹಾಕಿಸುತ್ತಿದ್ದರೆ ಸೋಲು ನನ್ನದಾಗುತ್ತಿರಲಿಲ್ಲ’ ಎಂದು ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾರ್ಮಿಕವಾಗಿ ನುಡಿದರು.
ಅವರು ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ‘ಒಂದೇ ಕುಟುಂಬದಲ್ಲಿ ಎರಡು ಪಕ್ಷ ಬೇಡ ಎಂದು ಜಿಲ್ಲಾ ಪಂಚಾಯಿತಿ ಸದಸ್ಯನಾದ ನನ್ನ ತಮ್ಮನಿಗೂ ಬಿಜೆಪಿಗೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೆ. ನಾನು ಪ್ರಚಾರದಲ್ಲಿ ಮುರಟಿಪಾಳ್ಯ, ಬಲ್ಲವತ್ತ ಹಾಗೂ ಕೆ. ದೇವರಹಳ್ಳಿ ಹೊರತುಪಡಿಸಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನೂ ಸುತ್ತಿದ್ದೇನೆ. ಎಲ್ಲಾ ಕಡೆಯೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ ಕೊನೆಯ 48 ಗಂಟೆಗಳಲ್ಲಿ ಕೆಲವು ಏರುಪೇರುಗಳಾಯಿತು’ ಎಂದರು.
ಮೇ 26 ಕ್ಕೆ ಕೊಳ್ಳೇಗಾಲದಲ್ಲಿ ಸಭೆ
‘ಮೇ. 26 ಕ್ಕೆ ಕೊಳ್ಳೇಗಾಲದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಕೃತಜ್ಞತಾ ಹಾಗೂ ಆತ್ಮಾವಲೋಕನ ಸಭೆ ನಡೆಯಲಿದೆ. ಇದಕ್ಕೆ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ಕಾರ್ಯಕರ್ತರೂ ಭಾಗವಹಿಸಬೇಕು. ನನಗೆ ಇದು ಸತತ 5 ನೇ ಸೋಲಾಗಿದೆ. ಒಟ್ಟು 6 ಬಾರಿ ಸೋತಿರುವ ನನಗೆ ದೇವರೇ ತಡೆದುಕೊಳ್ಳುವ ಶಕ್ತಿ ನೀಡಿದ್ದಾನೆ' ಎಂದರು.
ತಾಪಂ ಸದಸ್ಯ ನಿರಂಜನ್, ಸಿದ್ದರಾಜು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಡಗೆರೆದಾಸ್, ಪ.ಪಂ ಸದಸ್ಯರಾದ ಜೆ. ಶ್ರೀನಿವಾಸ್, ವೈ.ವಿ. ಉಮಾಶಂಕರ್, ಕೆ. ಮಲ್ಲಯ್ಯ ಮುಖಂಡರಾದ ಮಹಾದೇವನಾಯಕ, ಮಹೇಶ್, ಲಿಂಗರಾಜಮೂರ್ತಿ, ಗುಂಬಳ್ಳಿ ನಂಜಯ್ಯ, ಮದ್ದೂರು ನಂಜಯ್ಯ, ವೈ.ಜಿ. ರಂಗನಾಥ, ಕಿಕನಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ಚೇತನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.