ADVERTISEMENT

ತರಕಾರಿ ತುಟ್ಟಿ: ಹಣ್ಣು, ಹೂವಿನ ಬೆಲೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:59 IST
Last Updated 21 ನವೆಂಬರ್ 2017, 6:59 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಟೊಮೊಟೊ
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಟೊಮೊಟೊ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಕಳೆದ ಮೂರು ವಾರಗಳಿಂದ ತರಕಾರಿ ಬೆಲೆ ಏರಿಕೆಯಾಗಿದ್ದು, ಬೇಸಿಗೆ ಝಳದಿಂದ ಬೆವರುತ್ತಿರುವ ಗ್ರಾಹಕರಲ್ಲಿ ಮತ್ತಷ್ಟು ಬೆವರಿಳಿಯುವಂತೆ ಮಾಡಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯುಂಟಾಗಿದೆ. ಇದರಿಂದ ಮಾರುಕಟ್ಟೆಗೆ ಅಗತ್ಯದಷ್ಟು ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಕಡಿಮೆಯಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಕಳೆದ ವಾರಕ್ಕೆ ಹೋಲಿಕೆ ಮಾಡಿದ್ದರೆ ಒಂದೆರಡು ತರಕಾರಿಗಳನ್ನು ಹೊರತುಪಡಿಸಿ ಉಳಿದ ತರಕಾರಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನುಗ್ಗೆಕಾಯಿ, ಗೆಡ್ಡೆಕೋಸು ಕೆಜಿಗೆ ₹ 100ರಂತೆ ಮಾರಾಟ ಮಾಡಲಾಗುತ್ತಿದೆ. ದಪ್ಪ ಮೆಣಸಿಕಾಯಿ ಬೆಲೆ ₹ 80ಕ್ಕೆ ಇಳಿದಿದೆ. ಇಳಿಯದ ಸಣ್ಣ ಈರುಳ್ಳಿ ಬೆಲೆ: ದ್ವಿಶತಕ ತಲುಪಿರುವ ಸಣ್ಣ ಈರುಳ್ಳಿ ಧಾರಣೆ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ.

ADVERTISEMENT

‘ಕಳೆದ 15 ದಿನಗಳಿಂದ ಸಣ್ಣ ಈರುಳ್ಳಿಯನ್ನು ಕೇಳುವವರೇ ಇಲ್ಲ. ಶುಭ ಸಮಾರಂಭಗಳಿಗೆ 1 ರಿಂದ 2 ಕೆ.ಜಿ ಮಾತ್ರ ಕೊಳ್ಳುತ್ತಿದ್ದಾರೆ. ಸಾಂಬಾರಿಗಾಗಿ ಖರೀದಿಸುತ್ತಿದ್ದವರೂ ಇತ್ತ ಬರುವುದೇ ಇಲ್ಲ’ ಎಂದು ವ್ಯಾಪಾರಿ ಭಾಗ್ಯಮ್ಮ ಬೇಸರ ವ್ಯಕ್ತಪಡಿಸಿದರು.

ಹಣ್ಣು, ಹೂ ಸ್ಥಿರ: ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ಸ್ಥಿರವಾಗಿದ್ದು, ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಇಳಿಕೆಯಾಗಿದ್ದು, ಕೆ.ಜಿ.ಗೆ ₹ 60 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ನಿಗದಿಯಾಗಿದೆ. ಚೆಂಡು ಹೂವು ₹ 10, ಮಲ್ಲಿಗೆ ₹ 20ರಿಂದ 30, ಕಾಕಡ ₹ 20ರಿಂದ 30, ಕನಕಾಂಬರ ₹ 30ರಿಂದ 50 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ದರವಿದೆ.

ತರಕಾರಿ ಬೆಲೆ(ಕೆಜಿಗೆ)

ಹಸಿಮೆಣಸಿಕಾಯಿ ₹ 30

ಟೊಮೆಟೊ ₹ 40

ಬೂದುಗುಂಬಳ ₹ 20

ಸಿಹಿಕುಂಬಳ ₹ 15

ಬಿಳಿ ಬದನೆ ₹ 40

ಬೀನ್ಸ್‌ ₹ 40

ಕ್ಯಾರೆಟ್‌ ₹ 40

ಸೌತೆಕಾಯಿ ₹ 20

ಆಲೂಗಡ್ಡೆ ₹ 20

ಮೂಲಂಗಿ ₹ 30

* * 

ಹಣ್ಣಿನ ಧಾರಣೆ(ಕೆಜಿಗೆ):

ಸೇಬು ₹ 100 ರಿಂದ 120

ಕಿತ್ತಳೆ ₹ 60 ರಿಂದ 80

ಮೂಸಂಬಿ ₹ 80

ದ್ರಾಕ್ಷಿ ₹100

ದಾಳಿಂಬೆ ₹ 80

ಸಪೋಟ ₹ 60

* * 

ಧಾರಣೆ ಏರಿಕೆಯಿಂದ ಗ್ರಾಹಕರು ತರಕಾರಿ ಖರೀದಿಗೆ ಹಿಂಜರಿಯುತ್ತಿದ್ದಾರೆ. ಇದರಿಂದ ಸಾಕಷ್ಟು ತರಕಾರಿಗಳು ಉಳಿದುಕೊಂಡು ನಷ್ಟದ ಭೀತಿ ಎದುರಾಗಿದೆ
ರಘು
ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.