ಯಳಂದೂರು: ಪಟ್ಟಣದ ಸೇರಿದಂತೆ ವಿವಿಧೆಡೆ ಡಾ.ಬಿ.ಆರ್. ಅಂಬೇಡ್ಕರ್ ರವರ 127ನೇ ಜಯಂತಿಯನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭನವದ ಮುಂಭಾಗ ತಾಲ್ಲೂಕು ಸೇವಾ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಟಿಎಪಿಸಿಎಂಎಸ್ ಅಧ್ಯಕ್ಷ ವಡಗೆರೆದಾಸ್ ಮಾತನಾಡಿ, ಅಂಬೇಡ್ಕರ್ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸಿದ ಮಹಾನ್ ಶಕ್ತಿಯಾಗಿದ್ದಾರೆ. ಇಂತಹ ಮಹಾನ್ ನಾಯಕನ ಜನ್ಮದಿನವನ್ನು ವಿಶ್ವಸಂಸ್ಥೆಯೂ ಆಚರಿಸುತ್ತಿರುವುದು ಭಾರತೀಯರ ಹೆಮ್ಮೆಯಾಗಿದೆ ಎಂದರು.
ಇಂಥ ನಾಯಕ ಹುಟ್ಟಿದ ದೇಶದಲ್ಲಿ ಶೋಷಿತ ಸಮಾಜಗಳ ಉದ್ಧಾರಕ್ಕಾಗಿ ರೂಪಿಸಿದ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ದೇಶದಲ್ಲಿ ಅಸ್ಪೃಶ್ಯತೆ ತಾಂಡವ ಆಡುತ್ತಿದೆ. ಎಲ್ಲೆಲ್ಲೂ ಜಾತಿ, ಧರ್ಮಗಳನ್ನು ಎತ್ತಿಕಟ್ಟುವ ಕೆಲಸಗಳು ನಡೆಯುತ್ತಿವೆ. ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣತೊಡುವ ದಿನ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರೇವಣ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ತಾ.ಪಂ ಅಧ್ಯಕ್ಷ ನಂಜುಂಡಯ್ಯ, ಸದಸ್ಯ ನಿರಂಜನ್ ಪ.ಪಂ ಸದಸ್ಯ ಜೆ.ಶ್ರೀನಿವಾಸ್ ಕೆ. ಮಲ್ಲಯ್ಯ ಎಪಿಎಂಸಿ ನಿರ್ದೇಶಕ ಚಿಕ್ಕಮಾದಯ್ಯ ಗ್ರಾ.ಪಂ ಸದಸ್ಯ ಹೊನ್ನೂರು ಪುಟ್ಟಸ್ವಾಮಿ, ಕೆಸ್ತೂರು ಸಿದ್ದರಾಜು, ಶಾಂತರಾಜು, ಲಿಂಗರಾಜಮೂರ್ತಿ, ಎ.ಎನ್. ನಾಗೇಂದ್ರ, ಮಧು, ಅನಂತ್ ಮದ್ದೂರು, ನೀಲಯ್ಯ, ಬಿ. ಲಿಂಗರಾಜು ಇತರರು ಇದ್ದರು.
ವಿವಿಧೆಡೆ ಆಚರಣೆ: ತಾಲ್ಲೂಕಿನ ಯರಿಯೂರು, ಮದ್ದೂರು, ಮಾಂಬಳ್ಳಿ, ಅಂಬಳೆ, ಗುಂಬಳ್ಳಿ, ಯರಗಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ಸಮಾಜಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಆಚರಣೆ ನೆರವೇರಿತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.