ADVERTISEMENT

ನಾಳೆಯಿಂದ ರಾಷ್ಟ್ರೀಯ ಯುವಸಪ್ತಾಹ

ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದ ಅರ್ಥಪೂರ್ಣ ಆಚರಣೆಗೆ ಕ್ರಮ– ಡಿ.ಸಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:15 IST
Last Updated 11 ಜನವರಿ 2017, 10:15 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿದರು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿದರು   

ಚಾಮರಾಜನಗರ: ‘ಸ್ವಾಮಿ ವಿವೇಕಾನಂದ ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಜ.12ರಿಂದ 18ರವರೆಗೆ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಗುತ್ತಿದೆ. ಅಧಿಕಾರಿಗಳು ವಿವಿಧ ಚಟುವಟಿಕೆ ಹಮ್ಮಿಕೊಂಡು ಕಾರ್ಯೋನ್ಮುಖರಾಗಬೇಕು’ ಎಂದು ಜಿಲ್ಲಾಧಿಕಾರಿ ಬಿ. ರಾಮು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ಸಪ್ತಾಹ ಸಂಬಂಧ ನಡೆದ ಅಧಿಕಾರಿಗಳು, ಕಾಲೇಜು ಪ್ರಾಂಶುಪಾಲರ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದ ಅರ್ಥಪೂರ್ಣ ಆಚರಣೆಗೆ ಯುವ ಸಪ್ತಾಹ ಆಚರಿಸುತ್ತಿದ್ದು, ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾಲೇಜು, ಶಾಲೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಸಲಾಗುತ್ತದೆ ಎಂದರು.

12ರಂದು ಸ್ವಾಮಿ ವಿವೇಕಾನಂದರ ಜಯಂತಿ ಇದ್ದು, ಈ ಮೂಲಕ ಯುವ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾ ಹಾಗೂ ತಾಲ್ಲೂಕುಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಜಿಲ್ಲಾ ಕೇಂದ್ರದಲ್ಲಿ ಚಾಮರಾಜೇಶ್ವರ ದೇವಾಲಯದಿಂದ ಜೆ.ಎಚ್.ಪಟೇಲ್ ಸಭಾಂಗಣವರೆಗೆ ವಿದ್ಯಾರ್ಥಿಗಳ ಜಾಥಾ ನಡೆಯಲಿದೆ. ಅಲ್ಲಿ ಕಾರ್ಯಕ್ರಮ ಉದ್ಘಾಟನೆ ಆಗಲಿದೆ ಎಂದರು.

ತಾಲ್ಲೂಕು ಮಟ್ಟದಲ್ಲಿ ಆಯಾ ತಹಶೀಲ್ದಾರ್, ಕಾಲೇಜು ಪ್ರಾಂಶುಪಾಲರು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಿದ್ದಾರೆ ಎಂದು ತಿಳಿಸಿದರು.
ಶಾಲೆ ಅವಧಿಯಲ್ಲಿ ಶಿಕ್ಷಕರು ಪ್ರಾರ್ಥನೆ ಬಳಿಕ ವಿವೇಕಾನಂದರ ಚಿಂತನೆ, ಆದರ್ಶಗಳ ಬಗ್ಗೆ ತಿಳಿಸಬೇಕು. ಶ್ರೀರಾಮಕೃಷ್ಣ ಮಿಷನ್, ವಿವೇಕಾನಂದರ ಆಶ್ರಮ, ಮಠ, ಸ್ಥಳೀಯ ಸಾಹಿತಿ, ಚಿಂತನಕಾರರು, ಸರ್ಕಾರೇತರ ಸಂಘಸಂಸ್ಥೆಗಳನ್ನು ತೊಡಗಿಸಿ ಶಾಲಾ, ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಕಿರು ಉಪನ್ಯಾಸ ಆಯೋಜಿಸಬಹುದು ಎಂದರು.

ಜ.12ರಿಂದ 18ರವರೆಗೆ ಕಾಲೇಜುಗಳಲ್ಲಿಯೂ ಸಪ್ತಾಹ ನಡೆಸಬೇಕು. ಸಾಕ್ಷರತೆ, ಸಮುದಾಯ ಗೀತೆ, ನಾಟಕ, ಜನಪದ ಸಂಸ್ಥೆ ಕಲಾವಿದರಿಂದ ಕಲಾ ಪ್ರದರ್ಶನ, ಗ್ರಾಮೀಣ ಕ್ರೀಡೆ, ಶಾಲೆ ಅಂಗನವಾಡಿಗಳಿಗೆ ಪುಸ್ತಕ ಸಂಗ್ರಹಿಸಿ ನೀಡಬೇಕು. ನೇತ್ರದಾನ, ರಕ್ತದಾನ, ನೈರ್ಮಲ್ಯ ಮಹತ್ವ, ಪರಿಸರ ಸಂರಕ್ಷಣೆ ಹೀಗೆ ಹಲವು ವಿಭಿನ್ನ ಕಾರ್ಯಕ್ರಮ ಏರ್ಪಡಿಸಬೇಕು ಎಂದು ತಿಳಿಸಿದರು.

ಜ. 18ರಂದು ರಾಜ್ಯ ಮಟ್ಟದ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ. ಸ್ಥಳೀಯ ವಿದ್ಯಾರ್ಥಿಗಳು, ಸ್ಪರ್ಧೆಗಳ ವಿಜೇತರನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಜಿ.ಪಂ. ಸಿಇಒ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಡಿಸಿಪಿಯು ರಜಿನಾ ಪಿ.ಮಲಾಕಿ, ಡಿಸಿಪಿಐ ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.