ADVERTISEMENT

ನ್ಯಾಯಾಲಯದಲ್ಲಿ ಕನ್ನಡ ಬಳಸಿ

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮನವಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:52 IST
Last Updated 3 ಜನವರಿ 2017, 9:52 IST

ಚಾಮರಾಜನಗರ: ‘ಹೈಕೋರ್ಟ್‌ನಿಂದ ಅಧೀನ ನ್ಯಾಯಾಲಯಗಳವರೆಗೂ ಸಂಪೂರ್ಣವಾಗಿ ಎಲ್ಲ ಹಂತಗಳಲ್ಲೂ ಕನ್ನಡ ಭಾಷೆ ಬಳಕೆ ಆಗಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ‘ನ್ಯಾಯಾಲಯದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ‘ನ್ಯಾಯಾಲಯದಲ್ಲಿ ಕನ್ನಡ ಚಳವಳಿ’ ಪ್ರಾರಂಭಿಸಲಾಗುತ್ತಿದೆ. ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಮನವಿ ನೀಡಲಾಗುತ್ತದೆ ಎಂದು ತಿಳಿಸಿದರು.

‘ಕರ್ನಾಟಕ ಏಕೀಕರಣವಾಗಿ 60 ವರ್ಷ ಪೂರೈಸಿದೆ. ಆದರೂ, ರಾಜ್ಯ ಭಾಷೆ ಕನ್ನಡದ ಬೆಳವಣಿಗೆ ಹಿಂದುಳಿದಿದೆ. ಸರ್ಕಾರ ಕನ್ನಡವನ್ನು ಎಲ್ಲ ಹಂತದಲ್ಲೂ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕನ್ನಡ ಭಾಷೆಗೆ ಮಾನ್ಯತೆ ಇಲ್ಲ. ನ್ಯಾಯಾಲಯದಲ್ಲಿ ಇನ್ನು ಮುಂದೆ ಕನ್ನಡ ಭಾಷೆ ಸಂಪೂರ್ಣವಾಗಿ ಬಳಕೆಯಾಗಬೇಕು. ತೀರ್ಪುಗಳು ಕನ್ನಡದಲ್ಲೇ ಪ್ರಕಟವಾಗಬೇಕು. ವಿಚಾರಣೆ ಕನ್ನಡದಲ್ಲೇ ನಡೆಯಬೇಕು, ಕಕ್ಷಿದಾರರಿಗೆ ಮನವರಿಕೆಯಾಗುವಂತೆ ಕನ್ನಡದಲ್ಲೇ ತೀರ್ಪು ನೀಡಬೇಕು’ ಎಂದು ಒತ್ತಾಯಿಸಿದರು.

ಬರವಣಿಗೆ, ವ್ಯವಹಾರ ಎಲ್ಲ ಟಿಪ್ಪಣಿಗಳು ಕನ್ನಡದಲ್ಲೇ ಇದ್ದರೆ ಕಕ್ಷಿದಾರರಿಗೆ ತಮ್ಮ ಮೊಕದ್ದಮೆಗಳು ಏನಾಗುತ್ತದೆ ಎಂಬುದು ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಲಕ್ಷ್ಮಣ್ ಎಫ್‌. ಮಳವಳ್ಳಿ ಮತ್ತು ವಕೀಲರ ಸಂಘದ ಉಪಾಧ್ಯಕ್ಷ ಶಿವಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಚಾ.ರಂ.ಶ್ರೀನಿವಾಸ್‌ಗೌಡ, ಎಚ್.ಆರ್.ನಾಗರಾಜಮೂರ್ತಿ, ನಾಗರಾಜನಾಯಕ, ಹುಂಡಿ ಬಸವಣ್ಣ, ಕಾರ್‌ನಾಗೇಶ್, ವರದರಾಜು, ನಂಜುಂಡಶೆಟ್ಟಿ, ನಾರಾಯಣಸ್ವಾಮಿ, ಶಿವಲಿಂಗಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.