ADVERTISEMENT

ಪಹಣಿ ಪತ್ರಕ್ಕಾಗಿ ರೈತರ ಪರದಾಟ

ಬೆಳಿಗ್ಗೆಯಿಂದ ಸಂಜೆಯವರೆಗೂ ಸರತಿಯಲ್ಲಿ ನಿಲ್ಲುವ ಕೃಷಿಕರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:53 IST
Last Updated 13 ಜುಲೈ 2017, 9:53 IST

ಗುಂಡ್ಲುಪೇಟೆ:  ಬೆಳೆ ವಿಮೆ ಮಾಡಿಸಲು ಪಹಣಿಪತ್ರ ಅವಶ್ಯವಿದ್ದು, ಅದನ್ನು ಪಡೆಯಲು ತಾಲ್ಲೂಕು ಕಚೇರಿಯ ಮುಂದೆ ರೈತರು ಬೆಳಿಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಸಕಾಲದಲ್ಲಿ ಮಳೆಯಾಗದೆ ರೈತರು ಬೆಳೆ ನಷ್ಟ ಅನುಭವಿಸಿದ ಸಂಕಟ ಒಂದೆಡೆಯಾದರೆ ಅದಕ್ಕೆ  ಪರಿಹಾರ ಸಿಗಬೇಕಾದರೆ ವಿಮೆಗೆ ಒಳಪಡಿಸಬೇಕು. ಬೆಳೆ ವಿಮೆಗೆ ಹಣ ಪಾವತಿಗೆ ಜುಲೈ 15 ಕಡೆ ದಿನವಾಗಿದ್ದು ಇದಕ್ಕೆ ಪೂರಕ ದಾಖಲೆ ಪಡೆಯಲು ಪರದಾಡುತ್ತಿದ್ದಾರೆ.

ಪಟ್ಟಣದ ತಾಲ್ಲೂಕು ಕಚೇರಿ, ತೆರಕಣಾಂಬಿ, ಹಂಗಳ ಹಾಗೂ ಬೇಗೂರು ನಾಡಕಚೇರಿಗಳಲ್ಲಿ ಮಾತ್ರ ಪಹಣಿಪತ್ರಗಳು ದೊರಕುತ್ತಿವೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ನೀಡಬೇಕಾಗಿದ್ದರೂ ನೀಡುತ್ತಿಲ್ಲ. ಇದರಿಂದ ದಾಖಲಾತಿಗಳನ್ನು ಪಡೆಯಲು ಸರತಿಯಲ್ಲಿ ನಿಲ್ಲಬೇಕಾಗಿದೆ.

ADVERTISEMENT

ಇದಕ್ಕೆ ಬೆಳೆ ದೃಢೀಕರಣ ಪತ್ರ, ಪಹಣಿ ಪತ್ರ ಪಡೆದುಕೊಳ್ಳಲು ಬೆಳಗಿನಿಂದಲೂ ತಾಲ್ಲೂಕು ಕಚೇರಿಯ ಪಡಸಾಲೆಯ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದರೂ ಅಂತರ್ಜಾಲ ಸಂಪರ್ಕ ಹಾಗೂ ವಿದ್ಯುತ್ ಕೈಕೊಡುವುದರಿಂದ ಸಕಾಲಕ್ಕೆ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ.

ಬೆಳೆ ದೃಢೀಕರಣ ಪತ್ರ ಪಡೆಯಲು ಒಂದು ವಾರಗಳ ಕಾಲಾವಕಾಶ ಬೇಕಾಗುತ್ತಿದೆ. ಆದ್ದರಿಂದ ತಾಲೂಕು ಕಚೇರಿ ಹಾಗೂ ನಾಡಕಚೇರಿಗಳಲ್ಲಿ ಹೆಚ್ಚಿನ ಕೌಂಟರ್ ತೆರೆಯುವ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಪಹಣಿಪತ್ರ ವಿತರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.