ಚಾಮರಾಜನಗರ: ನಗರದಲ್ಲಿ ಶನಿವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ‘ಜನಾರೋಗ್ಯವೇ ರಾಷ್ಟ್ರದ ಶಕ್ತಿ’ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಮ್ಯಾರಥಾನ್ ಓಟ ನಡೆಯಿತು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಲೀಲ್ ಉಲ್ಲಾ ಓಟಕ್ಕೆ ಚಾಲನೆ ನೀಡಿದರು. ಮದೀನಾ ಮಸೀದಿ ಮುಂಭಾಗದಿಂದ ಆರಂಭಗೊಂಡ ಮ್ಯಾರಥಾನ್ ಓಟವು ಡಿವಿಯೇಷನ್ ರಸ್ತೆಯಿಂದ ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾ ಸಾರ್ವಜನಿಕ ಆಸ್ಪತ್ರೆವರೆಗೆ ಸಾಗಿತು. ಅಲ್ಲಿಂದ ಡಿವಿಯೇಷನ್ ರಸ್ತೆ ಮೂಲಕ ಲಾರಿ ನಿಲ್ದಾಣಕ್ಕೆ ತೆರಳಿ ಮುಕ್ತಾಯ ಗೊಂಡಿತು. ಬಳಿಕ ಯೋಗ ಕಾರ್ಯಕ್ರಮ ನಡೆಯಿತು.
ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಹಫೀಜ್ ಜಾವಿದ್ ಮಾತನಾಡಿ, ನಾಗರಿಕರಲ್ಲಿ ಯೋಗದ ಮಹತ್ವ ಕುರಿತು ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಹಾಗಾಗಿ, ಸಂಘಟನೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದರು.
ಎಲ್ಲರೂ ಯೋಗ, ಧ್ಯಾನ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಸರ್ದಾರ್ ಪಾಷಾ, ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಹಬೀಬ್, ಯೂನಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.