ADVERTISEMENT

ಯುವಜನರ ಸೆಳೆದ ಕ್ರೀಡಾಕೂಟ

ಯಳಂದೂರು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರತಿಭೆ ಮೆರೆದ ಗ್ರಾಮೀಣ ಮಕ್ಕಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:04 IST
Last Updated 29 ಆಗಸ್ಟ್ 2015, 7:04 IST

ಯಳಂದೂರು: ಅಥ್ಲೆಟಿಕ್, ಕೊಕ್ಕೊ, ಕಬಡ್ಡಿ, ತಟ್ಟೆ ಎಸೆತ, ಹೈಜಂಪ್‌ಗಳ ಕ್ರೀಡಾ ಕಲರವ. ಮಕ್ಕಳ ಪ್ರತಿಭೆಗೆ ಸಾಕ್ಷಿಯಾಗಲು ಬಂದ ಪೋಷಕರ ದಂಡು.
ಕೆೇಕೆ, ಕೂಗಾಟ, ಆಕರ್ಷಕ ನೃತ್ಯದ ಮೂಲಕ ಆಟೋಟಗಳ ಉದ್ಘಾಟನೆ ಸಮಾರಂಭ ಚಂದವಾಗಿಸಿದ ಆದರ್ಶ ಶಾಲಾ ಮಕ್ಕಳ ನೃತ್ಯದ ಝಲಕ್.

ಟೋಪಿ, ಟಿ–ಶರ್ಟ್ ತೊಟ್ಟು ಹಸಿರಿನ ಅಂಗಳಕ್ಕೆ ಕಳೆ ತಂದ ದೈಹಿಕ ಶಿಕ್ಷಣ ಶಿಕ್ಷಕರು. ಶ್ವೇತಧಾರಿಗಳಾಗಿ ಮಕ್ಕಳ ತಂಡ ಕಟ್ಟಿಕೊಂಡು ಓಡಾಡಿದ ಶಿಕ್ಷಕಿಯರು.
ಇವು, ಸಾರ್ವಜನಿಕ ಶಿಕ್ಷಣ ಇಲಾಖೆ ಮೂರು ದಿನ ಕಾಲ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾ ಕೂಟದ ಸಂಭ್ರಮದ ಕ್ಷಣಗಳು.

ಮೇಲಾಟಗಳಲ್ಲಿ ಪ್ರಧಾನ ಆಕರ್ಷಣೆಗೆ ಕಾರಣವಾಗಿದ್ದು ಹೈಜಂಪ್‌ ಕ್ರೀಡೆ.  ವಿದ್ಯಾರ್ಥಿಗಳು ಮತ್ತು  ವಿದ್ಯಾರ್ಥಿನಿಯರ ಈ ಆಟೋಟವನ್ನು ನೂರಾರು ಜನರು ಆಸಕ್ತಿಯಿಂದ ವೀಕ್ಷಿಸಿದರು.

5 ತಂಡಗಳು ಭಾಗವಹಿಸಿದ್ದ ಹೆಣ್ಣು ಮಕ್ಕಳ ಕಬಡ್ಡಿ ಆಟವೂ ಗಮನಸೆಳೆಯಿತು. ಕೊಕ್ಕೊ ಮತ್ತು  ಓಟದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕುತ್ತಾ ಸ್ಪರ್ಧಿ ಗಳನ್ನು ಪ್ರೋತ್ಸಾಹಿಸಿದರು.

‘ನಮ್ಮ ಮೆಚ್ಚಿನ ಆಯ್ಕೆ ಹೈಜಂಪ್‌ ಕ್ರೀಡೆ. ಪ್ರತಿ ವರ್ಷ ಶಾಲೆಯನ್ನು ಈ ವಿಭಾಗದಲ್ಲಿ ಪ್ರತಿನಿಧಿಸುತ್ತೇವೆ. ಸಂಜೆ ಮತ್ತು ಬೆಳಗಿನ ಸಮಯ ಅಭ್ಯಾಸ ನಡೆಸುತ್ತೇವೆ. ರಾಜ್ಯ ಮಟ್ಟದಲ್ಲಿ ಗಮನಸೆಳೆವ ವಿಶ್ವಾಸವಿದೆ’ ಎನ್ನುತ್ತಾರೆ ಆದರ್ಶ ಮತ್ತು ಮಾಂಬಳ್ಳಿ ಶಾಲೆಯ ಅಜಿತ್ ಕುಮಾರ್‌, ಮನೋಹರ್, ಕಾವ್ಯ, ಮಹೇಶ್ವರಿ ಅವರು.

‘ಈ ವರ್ಷ ಮಾಂಬಳ್ಳಿ ಸರ್ಕಾರಿ ಪ್ರೌಢಶಾಲೆ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿತ್ತು. ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ ನೀಡಲಾಯಿತು’ ಎನ್ನುತ್ತಾರೆ ಟಿಪಿಒ ಮಹದೇವ್‌ ಹಾಗೂ ಮುಖ್ಯ ಶಿಕ್ಷಕ ರಮೇಶ್.

ಇಲ್ಲಿ ಕ್ರೀಡೆಗೆ ಪೂರಕವಾದ ಕ್ರೀಡಾಂಗಣ ಇಲ್ಲ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಂಗಳದಲ್ಲಿಯೇ ಅಭ್ಯಾಸ ನಡೆಸಬೇಕು.  ಜನ ಪ್ರತಿನಿಧಿಗಳು ಕ್ರೀಡಾಂಗಣ ನಿರ್ಮಿಸಲು ಆಸಕ್ತಿ ವಹಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಯರಿಯೂರು ನಾಗೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.