ಯಳಂದೂರು: ಸಮೀಪದ ಗಂಗವಾಡಿ ಗ್ರಾಮದಲ್ಲಿರುವ ಐತಿಹಾಸಿಕ ವೀರಭದ್ರೇಶ್ವರ ಹಾಗೂ ಭದ್ರಕಾಳಮ್ಮ ದೇಗುಲದಲ್ಲಿ ಶುಕ್ರವಾರ ನಡೆದ ರಥೋತ್ಸವದಲ್ಲಿ ಭಕ್ತರು ಭಕ್ತಿಪರಾಕಾಷ್ಠೆ ಮೆರೆದರು.
12ನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣವಾಗಿರುವ ದೇಗುಲ ವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಯುಗಾದಿ ನಂತರ ಇಲ್ಲಿ ತೇರು ಮತ್ತು ಕೊಂಡೋತ್ಸವ ಸೇರಿದಂತೆ ಮೂರು ದಿನ ಉತ್ಸವವನ್ನು ಆಚರಿಸುವ ಸಂಪ್ರದಾಯ ಇದೆ.
ಹಳೆಯ ತೇರು ಶಿಥಿಲವಾಗಿತ್ತು. ಭಕ್ತರ ನೆರವಿನೊಂದಿಗೆ ಅಂದಾಜು ₹ 10 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ ಮಾಡಲಾಗಿದೆ. ರಥವನ್ನು ಬಣ್ಣಬಣ್ಣದ ಬಾವುಟ, ಪತಾಕೆ, ಎಳೆನೀರು ಮತ್ತು ಬಾಳೆ ಗೊನೆಗಳು, ವಿಶೇಷ ಹೂವು ಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿ ದಂತೆ ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿತ್ತು.
ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪಿ.ವಿ.ಬಸವರಾಜಪ್ಪ, ಪಿ.ವಿ. ನಂಜುಂಡ ಸ್ವಾಮಿ, ಎಂ.ಎಸ್. ಶಿವಾನಂದ ರವರ ಕುಟುಂಬದದವರು ಪ್ರತಿ ವರ್ಷದಂತೆ ಈ ವರ್ಷವೂ ಭೋಜನದ ವ್ಯವಸ್ಥೆ ಮಾಡಿದ್ದರು.
ಶನಿವಾರ ಸಂಜೆ 5 ಗಂಟೆಗೆ ದೇಗುಲದ ಎದುರಿಗಿರುವ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕೊಂಡೋತ್ಸವ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ.
ಅಭಿವೃದ್ಧಿಗೆ ಕ್ರಮ: ಈ ಸಂದರ್ಭದಲ್ಲಿ ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಮಾತನಾಡಿ, ಭಕ್ತರು ₹ 1 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಇದನ್ನು ಬಳಕೆ ಮಾಡುವುದು ಸೇರಿದಂತೆ ಸಂಸದರ ಹಾಗೂ ಶಾಸಕರ ನಿಧಿಯಿಂದಲೂ ಹಣ ನೀಡುವ ಭರವಸೆ ದೊರೆತಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.