ADVERTISEMENT

ಸ್ಥಿರತೆ ಕಾಯ್ದುಕೊಂಡ ತರಕಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:16 IST
Last Updated 5 ಡಿಸೆಂಬರ್ 2017, 8:16 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ತರಕಾರಿ
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ತರಕಾರಿ   

ಚಾಮರಾಜನಗರ: ಒಂದು ವಾರದಲ್ಲಿ ತರಕಾರಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಹೂವು, ಹಣ್ಣಿನ ಬೆಲೆ ಸಹ ಯಥಾಸ್ಥಿತಿಯಲ್ಲಿ ಇದೆ. ಎರಡು ತಿಂಗಳಿನಿಂದ ಗಗನಕ್ಕೇರಿದ್ದ ತರಕಾರಿಗಳ ಬೆಲೆ ಎರಡು ವಾರಗಳಿಂದ ತಕ್ಕಮಟ್ಟಿಗೆ ಇಳಿಕೆಯಾಗಿರುವುದರಿಂದ ಗ್ರಾಹಕರಿಗೆ ತುಸು ಸಮಾಧಾನ ನೀಡಿದೆ.

ನುಗ್ಗೆಕಾಯಿ ಹಾಗೂ ಸಣ್ಣ ಈರುಳ್ಳಿ ಪೂರೈಕೆ ಪ್ರಮಾಣ ವಾರದಿಂದ ವಾರಕ್ಕೆ ಕಡಿಮೆಯಾಗುತ್ತಿರುವುದರಿಂದ ಬೆಲೆ ಇಳಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಹಾಗೂ ಸಣ್ಣ ಈರುಳ್ಳಿ ಬೆಲೆ ಕೆ.ಜಿ.ಗೆ ₹ 180 ರಿಂದ 200 ನಿಗದಿಯಾಗಿದೆ.

ಜಿಲ್ಲಾ ಕೇಂದ್ರದ ಮಾರುಕಟ್ಟೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಯಿಂದ ತರಕಾರಿಗಳು ಬರುತ್ತಿದೆ. ಜತೆಗೆ, ಜಿಲ್ಲೆಯ ವಿವಿಧೆಡೆಯಿಂದಲೂ ಟೊಮೆಟೊ, ಗೆಡ್ಡೆಕೋಸು, ಹೂಕೋಸು, ಕ್ಯಾರೆಟ್‌ ಮುಂತಾದ ತರಕಾರಿಗಳು ಪೂರೈಕೆಯಾಗುತ್ತಿದೆ. ಇದರಿಂದ ತರಕಾರಿ ಬೆಲೆ ಸ್ಥಿರವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಅವರೆ, ತೊಗರಿಗೆ ಹೆಚ್ಚಿನ ಬೇಡಿಕೆ: ಜಿಲ್ಲಾ ಮಾರುಕಟ್ಟೆಯಲ್ಲಿ ಅವರೆಕಾಯಿ ಹಾಗೂ ತೊಗರಿಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರ ಭರಾಟೆ ಜೋರಾಗಿದೆ. ಅವರೆಕಾಯಿ ಕೆ.ಜಿಗೆ ₹ 40 ಹಾಗೂ ತೊಗರಿಕಾಯಿ ₹ 30ಕ್ಕೆ ಮಾರಾಟ ಮಾಡಲಾಗುತ್ತಿದೆ.

‘ಕಳೆದೆರಡು ವಾರಗಳಿಂದ ಮಾರುಕಟ್ಟೆಗೆ ಅಗತ್ಯಕ್ಕೆ ಅನುಗುಣವಾಗಿ ತರಕಾರಿ ಪೂರೈಕೆಯಾಗುತ್ತಿದೆ. ಬೆಲೆಯೂ ಇಳಿಕೆಯಾಗಿದೆ. ಆದರೆ, ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಎಲ್ಲೆಡೆ ದೂಳು ಆವರಿಸಿಕೊಂಡಿದ್ದು, ವ್ಯಾಪಾರ ಕುಸಿತವಾಗುತ್ತಿದೆ’ ಎಂದು ವ್ಯಾಪಾರಿಯೊಬ್ಬರು ಸಂಕಷ್ಟ ಹೇಳಿಕೊಂಡರು.

ಹಣ್ಣು, ಹೂ ಸ್ಥಿರ: ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ಸ್ಥಿರವಾಗಿದ್ದು, ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಈ ವಾರ ಇಳಿಕೆಯಾಗಿದ್ದು, ಕೆ.ಜಿ ಏಲಕ್ಕಿ ಬಾಳೆ ಹಣ್ಣಿಗೆ ₹ 50 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ನಿಗದಿಪಡಿಸಲಾಗಿದೆ.

ಚೆಂಡು ಹೂವು ₹ 10, ಮಲ್ಲಿಗೆ ₹ 50ರಿಂದ 60, ಕಾಕಡ ₹ 20ರಿಂದ 30, ಕನಕಾಂಬರ ₹ 50ರಿಂದ 60 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ನಿಗದಿಪಡಿಸಲಾಗಿದೆ.

ತರಕಾರಿ ಬೆಲೆ(ಕೆಜಿಗೆ)ಹಸಿಮೆಣಸಿಕಾಯಿ ₹ 30
ಟೊಮೆಟೊ ₹ 20
ಬೂದುಗುಂಬಳ ಕಾಯಿ ₹ 15
ಸಿಹಿಕುಂಬಳ ಕಾಯಿ ₹ 15
ಬಿಳಿ ಬದನೆಕಾಯಿ ₹ 30
ಬೀನ್ಸ್‌ ₹ 30
ಕ್ಯಾರೆಟ್‌ ₹ 30
ಸೌತೆಕಾಯಿ ₹ 20
ಆಲೂಗಡ್ಡೆ ₹ 20
ಮೂಲಂಗಿ ₹ 30
ಶುಂಠಿ ₹ 50
ಬೀಟ್‌ರೂಟ್‌ ₹ 40
ಹೀರೇಕಾಯಿ ₹ 30

ಹಣ್ಣು ಧಾರಣೆ(ಕೆಜಿಗೆ)

ಸೇಬು ₹100 ರಿಂದ 120
ಕಿತ್ತಳೆ ₹60 ರಿಂದ 80
ಮೂಸಂಬಿ ₹ 80
ದ್ರಾಕ್ಷಿ ₹100
ದಾಳಿಂಬೆ ₹100
ಸಪೋಟ ₹60

* * 

ಕಳೆದ ವಾರದಿಂದ ಮಾರುಕಟ್ಟೆಗೆ ಸೋನೆ ಅವರೆಕಾಯಿ ಬಂದಿದ್ದು, ಗ್ರಾಹಕರು ಇದನ್ನು ಹೆಚ್ಚು ಕೊಳ್ಳುತ್ತಿದ್ದಾರೆ. ಅದರಂತೆ ತೊಗರಿಕಾಯಿಗೂ ಹೆಚ್ಚಿನ ಬೇಡಿಕೆಯಿದೆ
ರಘು,
ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.