ADVERTISEMENT

ಅನ್ನಪೂರ್ಣೇಶ್ವರಿ ರಾಶಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:53 IST
Last Updated 19 ನವೆಂಬರ್ 2017, 4:53 IST

ಚಿಂತಾಮಣಿ: ನಗರದ ಎನ್.ಆರ್.ಬಡಾವಣೆಯ ಕಾಳಿಕಾಂಭ ಕಮಟೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆ ಶನಿವಾರದ ಅಂಗವಾಗಿ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಒಳಗಡೆ ಹಾಗೂ ಹೊರಗಡೆ ದೀಪೋತ್ಸವದ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕಾಳಿಕಾಂಭ ಕಮಟೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು.

ಗೋಪೂಜೆ: ಹಿಂದೂ ಸಂಪ್ರದಾಯದ ಪ್ರಕಾರ ಮುಕ್ಕೋಟಿ ದೇವತೆಗಳು ಗೋವಿನಲ್ಲಿ ನೆಲೆಸಿರುತ್ತಾರೆ ಎಂಬ ಪ್ರತೀತಿಯಿಂದ ದೇವಾಲಯದ ಪ್ರವೇಶಕ್ಕೆ ಮುನ್ನ ಗೋಪೂಜೆ ಸಲ್ಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಲಕ್ಷದೀ ಪೋತ್ಸವ: ದೇವಾಲಯದಲ್ಲಿ ಅಮ್ಮನವರಿಗೆ ಲಕ್ಷ ಬುತ್ತಿಗಳಿಂದ ತಯಾರಿಸಿರುವ 101 ದೀಪಗಳನ್ನು ಭಕ್ತರು ಬೆಳಗಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಮುಂದೆ 9 ಅಡಿಗಳ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತು. ವರ್ಷದ 365 ದಿನಗಳ ಪ್ರತೀಕವಾಗಿ ಶಿವಲಿಂಗಕ್ಕೆ 365 ದೀಪಗಳನ್ನು ಬೆಳಗಿಸಿದ್ದು ವಿಶೇಷವಾಗಿತ್ತು.

ದೇವಾಲಯದ ಆವರಣದಲ್ಲಿ ಧರ್ಮಸ್ಥಳದ ಮಂಜುನಾಥಸ್ವಾಮಿಯ ಸನ್ನಿಧಿಯ ಮಾದರಿಯಲ್ಲಿ ಅನ್ನಪೂರ್ಣೇಶ್ವರಿ ರಾಶಿಗಳನ್ನುನಿರ್ಮಿಸಿ ದೀಪೋತ್ಸವ ನೆರವೇರಿಸಿದ್ದು ಭಕ್ತರ ಮನಸೆಳೆಯಿತು. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

ರಥೋತ್ಸವ
ಶಿಡ್ಲಘಟ್ಟ: ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್‌ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಶನಿವಾರ ನಡೆಯಿತು.

ರಥೋತ್ಸವ ಅಂಗವಾಗಿ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.

ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ತಿನಿಸುಗಳ, ಆಟಿಕೆಗಳ, ಗೃಹೋಪಯೋಗಿ ವಸ್ತುಗಳ ಸಾಲು ಸಾಲು ಅಂಗಡಿಗಳಿದ್ದು, ಜನರು ಬತ್ತಾಸು, ಬುರುಗು, ಕಡ್ಲೇಬೀಜವನ್ನು ಕೊಂಡು ತಿನ್ನುತ್ತಿದ್ದುದು ಸಹಜವಾಗಿತ್ತು.

ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣರೆಡ್ಡಿ, ಇ.ಒ ವೆಂಕಟೇಶ್, ದೇವಾಲಯದ ಧರ್ಮದರ್ಶಿ ಕೆ.ಬಿ.ಅಯ್ಯಪ್ಪ, ಸಂಚಾಲಕ ಉದ್ದಂಡಚಾರಿ, ಚನ್ನರಾಯಪ್ಪ, ಸಂಗಪ್ಪ, ಅನಿಲ್‌ಕುಮಾರ್, ಸುಶೀಲಮ್ಮ, ಮುಖಂಡರಾದ ಆಂಜಿನಪ್ಪ, ಭಾಗ್ಯಮ್ಮ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.