ADVERTISEMENT

ಆಟಿಸಂ ಅರಿವು: ರಂಗಸ್ಥಳಕ್ಕೆ ಬೈಕ್ ರ್‍ಯಾಲಿ

ಡೆಲ್ ಇಎಂಸಿ ಸಂಸ್ಥೆ, ಮಾನಸ ಆಸ್ಪತ್ರೆ, ರೋಟರಿ ಸಂಸ್ಥೆ ಸಹಯೋಗ; 400ಕ್ಕೂ ಹೆಚ್ಚು ಜನರು ಭಾಗಿ

​ಪ್ರಜಾವಾಣಿ ವಾರ್ತೆ
Published 8 ಮೇ 2017, 7:00 IST
Last Updated 8 ಮೇ 2017, 7:00 IST
ಚಿಕ್ಕಬಳ್ಳಾಪುರ: ಆಟಿಸಂ ಕುರಿತು ಅರಿವು ಮೂಡಿಸಲು ಡೆಲ್ ಇಎಂಸಿ ಸಂಸ್ಥೆ ಬೆಂಗಳೂರಿನಿಂದ ತಾಲ್ಲೂಕಿನ ರಂಗಸ್ಥಳದವರೆಗೆ ಭಾನುವಾರ ಬೈಕ್ ರ್‍ಯಾಲಿ ಹಮ್ಮಿಕೊಂಡಿತ್ತು.
 
ಬೆಂಗಳೂರಿನ ಮಹದೇವಪುರ ದಲ್ಲಿರುವ ಸಂಸ್ಥೆಯಿಂದ ಬೆಳಿಗ್ಗೆ 6.30ಕ್ಕೆ ಪ್ರಾರಂಭವಾರ ರ್‍ಯಾಲಿ ಬೂದಿಗೆರೆ, ದೇವನಹಳ್ಳಿ,  ಕುಡುವತಿ, ನಂದಿ, ಕಂದವಾರ ಮಾರ್ಗವಾಗಿ ಐತಿಹಾಸಿಕ ಸ್ಥಳವಾದ ರಂಗಸ್ಥಳಕ್ಕೆ ಬಂದಿತು. 400ಕ್ಕೂ ಹೆಚ್ಚು ಜನರು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. 
 
‘ಆಟಿಸಂ ನರವ್ಯೂಹಕ್ಕೆ ಸಂಬಂಧಿ ಸಿದ ಕಾಯಿಲೆ. ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸಿ ವ್ಯಕ್ತಿಯ ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ. ಆಟಿಸಂನಿಂದ ಬಳಲುವ ಮಕ್ಕಳಿಗೆ ತಮ್ಮ ಕೆಲಸಗಳನ್ನು ನಿರ್ವಹಿಸಲು ಇತರರ ಸಹಾಯದ ಅವಶ್ಯಕ’ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
 
ರ್‍ಯಾಲಿ ನಗರ ಪ್ರವೇಶಿಸುತ್ತಿದ್ದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಂಚಾರಕ್ಕೆ ತೊಂದರೆ ಯಾಗದಂತೆ ರಂಗಸ್ಥಳ ದವರೆಗೂ ಸಂಚಾರಿ ಠಾಣೆ ಪೊಲೀಸರು ಅವರ ಹಿಂದೆಯೇ ಸಾಗಿದರು.

ಜನರು ಹೊಸದು ಎನ್ನುವಂತೆ ತಮ್ಮ ಮನೆಗಳಿಂದ ಹೊರಗೆ ಬಂದು ರ್‍ಯಾಲಿಯನ್ನು ವೀಕ್ಷಿಸಿದರು. ಮಾನಸ ಆಸ್ಪತ್ರೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
****
ಮೋಜು ಮಸ್ತಿ
ವಾರಾಂತ್ಯದ ಮೋಜು ಮಸ್ತಿಗಾಗಿ ಟೆಕ್ಕಿಗಳು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಐತಿಹಾಸಿಕ, ಶ್ರದ್ಧಾ ಭಕ್ತಿಯ ಕೇಂದ್ರವಾದ ರಂಗಸ್ಥಳದಲ್ಲಿ ಪಾಶ್ಚಿಮಾತ್ಯ ಸಂಗೀತ ಮಾರ್ದನಿಸಿತು. ದೇವಾಲಯಕ್ಕೆ ಬಂದ ಭಕ್ತರು ಇದರಿಂದ ಬೇಸರಗೊಂಡರು. ತಮಟೆ ವಾದ್ಯಕ್ಕೂ ಹೆಜ್ಜೆ ಹಾಕಿದರು. ಒಳ್ಳೆಯ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದ ರ್‍ಯಾಲಿಗೆ  ಮೋಜು ಮಸ್ತಿ ಕಪ್ಪು ಚುಕ್ಕೆಯಂತೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.