ಚೇಳೂರು: ‘ಎತ್ತಿನ ಹೊಳೆ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಯೋಜನೆ ಜಾರಿಗೆ ರಾಜ್ಯ ಸರ್ಕಾರ ₹ 13 ಸಾವಿರ ಕೋಟಿ ಬಿಡುಗಡೆ ಮಾಡಿದೆ’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು. ಚೇಳೂರು ಹೋಬಳಿಯ ಚಾಕವೇಲು ಗ್ರಾಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಆಯೋಜಿಸಿದ್ದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ರೈತರ ಸಾಲವನ್ನ ₹ 50 ಸಾವಿರ ಮನ್ನಾ ಮಾಡಿದ್ದು ಸಂತಸ ತಂದಿದೆ. ಡಿಸಿಸಿ ಬ್ಯಾಂಕ್ ಹಿಂದೆ ದಿವಾಳಿಯಾಗಿತ್ತು. ಇದೀಗ ಎಲ್ಲರ ಸಹಕಾರದಿಂದ ಕೋಟ್ಯಾಂತರ ರೂಪಾಯಿ ಸಾಲ ನೀಡುತ್ತಿರುವುದು ಶ್ಲಾಘನೀಯ’ ಎಂದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲ ನೀಡುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದೆ ಗೌಡ ಮಾತನಾಡಿ, ‘ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡಲಾಗುತ್ತಿದ್ದು ಪಡೆದ ಸಾಲ ಮರುಪಾವತಿಸಿ ಬ್ಯಾಂಕ್ ಆಭವೃದ್ಧಿಗೆ ಶ್ರಮಿಸಬೇಕು’ ಎಂದರು. ಇದಕ್ಕೂ ಮುನ್ನ ಸಂಸದ-ಶಾಸಕರು ಗ್ರಾಮ ಪಂಚಾಯಿತಿ ಅಂಗಡಿ ಮಳಿಗೆ ಹಾಗೂ ಸಮುದಾಯ ಭವನಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಸಮಾರಂಭದಲ್ಲಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಬ್ಯಾಂಕ್ ನಿರ್ದೇಶಕ ನರಸಿಂಹಪ್ಪ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಂದ್ರ, ಸದಸ್ಯರಾದ ಕೆ.ಆರ್.ಸುದಾಕರ್ ರೆಡ್ಡಿ, ರಮಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಕೆ.ಎನ್.ಸುಧಾಕರರೆಡ್ಡಿ, ಮುಖಂಡರಾದ ಕೆ.ಎಂ.ರಾಮಿರೆಡ್ಡಿ, ಜಿ.ವಿ.ಕೃಷ್ಣಾರೆಡ್ಡಿ, ಮರವಪಲ್ಲಿ ಎಂ.ಬಿ.ಈಶ್ವರೆಡ್ಡಿ, ಸುಬ್ಬಾರೆಡ್ಡಿ, ಪುಲಗಲ್ ಪಿ.ಎಲ್.ಭಾನುಪ್ರಕಾಶ್, ಪಿ.ರಾಧಾಕೃಷ್ಣ, ಚೇಳೂರು ಕೆ.ಜಿ.ವೆಂಕಟರವಣ, ಎಚ್.ವಿ.ಬಾಡಾನಾರಾಯಣಸ್ವಾಮಿ, ಜಿ.ವಿ.ಸುರೇಂದ್ರ, ಎಂ.ವಿ.ರಮೇಶ್ ಚಂದ್ರಾರೆಡ್ಡಿ, ಟಿ.ಎ.ಸಿ ಸದಸ್ಯ ಚಾಕವೇಲು ಬಿ.ಆರ್.ನಾಗರಾಜ್ ಇದ್ದರು.
ಅಂಕಿ- ಅಂಶ
337 ಸ್ತ್ರೀಶಕ್ತಿ ಗುಂಪುಗಳು
₹10 ಕೋಟಿ ಸಾಲನೀಡುತ್ತಿರುವ ಹಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.