ಚಿಂತಾಮಣಿ: ದಡಾರ ಮತ್ತು ರುಬೆಲ್ಲಾ ಲಸಿಕೆಯ ಕುರಿತು ಜನರು ಯಾವುದೇ ಅನುಮಾನ, ಭಯ, ಆತಂಕ ಪಡುವ ಅಗತ್ಯವಿಲ್ಲ ಎಂದು ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪೂರ್ಣಿಮಾ ತಿಳಿಸಿದರು.
ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡುವ ಕಾರ್ಯಕ್ರಮ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ. ಮಕ್ಕಳ ಆರೋಗ್ಯ ರಕ್ಷಣೆಯೇ ಇದರ ಗುರಿಯಾಗಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮಕ್ಕಳಿಗೆ ದಡಾರ–ರುಬೆಲ್ಲಾ ಕಾಯಿಲೆ ಬರದಂತೆ ಮುಂಜಾಗ್ರತೆಯಾಗಿ ಲಸಿಕೆ ಹಾಕಲಾಗುತ್ತಿದೆ ಎಂದರು.
ಕೆಲವು ಕಡೆ ಸುಳ್ಳು ವದಂತಿ, ಅಪಪ್ರಚಾರಗಳನ್ನು ಮಾಡುತ್ತಿರುವುದರಿಂದ ಜನರಲ್ಲಿ ಗೊಂದಲ ಮೂಡುತ್ತಿರುವುದು ವಿಷಾಧನೀಯ. ಜನರು ಜಾಗೃತರಾಗಿ ವದಂತಿಗಳಿಗೆ ಕಿವಿಗೊಡದೆ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಶಿಕ್ಷಕಿ ಹಸೀನಾಬೇಗಂ ಮಾತನಾಡಿ, ಜನರಿಗೆ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುಳ್ಳುವದಂತಿಗಳನ್ನು ನಂಬಿ ಭಯಭೀತರಾಗುತ್ತಿರುವುದು ಅಜ್ಞಾನ, ಅನಕ್ಷರತೆಯ ಕಾರಣವಾಗಿದೆ ಎಂದರು
ಸಮುದಾಯದ ಜನನಾಯಕರು ಹಾಗೂ ವಿದ್ಯಾವಂತರು ಈ ಬಗ್ಗೆ ಜಾಗೃತಿ, ಅರಿವು ಮೂಡಿಸಿ ಸರ್ಕಾರಿ ಯೋಜನೆಯ ಯಶಸ್ವಿಗೆ ಸಹಕರಿಸಿ ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸಹಾಯಕಿಯರಾದ ರೂಪಾವತಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಶಾಂತಾ, ನಾಗಮಣಿ, ಆರೋಗ್ಯ ಇಲಾಖೆಯ ಶಿವಕುಮಾರ್, ಕೆ.ಆರ್.ರಮೇಶ್, ಮುಖಂಡರಾದ ಶೇಕ್ ದಸ್ತುಗೀರ್, ಅಂಗನವಾಡಿ ಕಾರ್ಯಕರ್ತೆ ಪದ್ಮ, ಮುನಿರತ್ನಮ್ಮ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.