ಚಿಕ್ಕಬಳ್ಳಾಪುರ: ನಗರದ ಸುತ್ತಮುತ್ತ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ನಗರದ ಅನೇಕ ಕಡೆಗಳಲ್ಲಿ ಮಳೆ ನೀರು ಮಡುಗಟ್ಟಿ ನಿಂತು ನಾಗರಿಕರು ತೊಂದರೆ ಅನುಭವಿಸಿದರು. ರಾತ್ರಿ 7.30ರ ಸುಮಾರಿಗೆ ಗುಡುಗು ಸಹಿತ ಕಾಣಿಸಿಕೊಂಡ ಮಳೆ ಸುಮಾರು ಒಂದು ಗಂಟೆ ಸುರಿಯಿತು.
ನಗರದ ಪ್ರಮುಖ ರಸ್ತೆಯಾದ ಬಜಾರ್ ರಸ್ತೆಯಲ್ಲಿ ನೀರು ಮಡುಗಟ್ಟಿ ನಿಂತು ಪ್ರವಾಹವನ್ನೇ ಸೃಷ್ಟಿಸಿತ್ತು. ಜತೆಗೆ ಶಿಡ್ಲಘಟ್ಟ ರಸ್ತೆಯಲ್ಲಿ ಮೇಲ್ಸೇತುವೆ ಬಳಿ ಮುಖ್ಯರಸ್ತೆಯಲ್ಲಿಯೇ ಅಡಿಗಟ್ಟಲೇ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ರೇಷ್ಮೆಗೂಡು ಮಾರುಕಟ್ಟೆ ಹಿಂಭಾಗದ ಪ್ರದೇಶ, ಸಾಧುಮಠದ ರಸ್ತೆ, ನೂತನ ಜಿಲ್ಲಾಸ್ಪತ್ರೆ ಮುಂಭಾಗ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಪ್ರವಾಹವನ್ನೇ ಸೃಷ್ಟಿಸಿತ್ತು. ವಿದ್ಯಾರ್ಥಿಗಳು, ಜನರು ಮನೆ ಸೇರಲು ಪರದಾಡಿದರು. ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.
8ನೇ ವಾರ್ಡ್ನಲ್ಲಿ ಜನರು ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಪರದಾಡುತ್ತಿದ್ದರು. ಕೆಳಗಿನ ತೋಟದ ರಸ್ತೆ, ಮಂಚನಬಲೆ ರಸ್ತೆ, ನೂತನ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆ, ವೇಣು ಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ, ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಹಿಂಭಾಗದ ರಸ್ತೆ, ಅಂಬೇಡ್ಕರ್ ನಗರ ಮೇಲ್ಸೇತ್ಸುವೆ ಬಳಿ ಪಾದಚಾರಿಗಳು, ವಾಹನ ಸವಾರರು ತೊಂದರೆಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.