ADVERTISEMENT

ಮದ್ಯದ ಅಂಗಡಿ ಬೇರೆಡೆಗೆ ವರ್ಗಾಯಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:32 IST
Last Updated 8 ಜುಲೈ 2017, 10:32 IST

 ಬಾಗೇಪಲ್ಲಿ: ಪಟ್ಟಣದ ಗೂಳೂರು ರಸ್ತೆಯಲ್ಲಿ ತಲೆಯೆತ್ತಿರುವ ಮದ್ಯದಂಗಡಿಗಳಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಅಂಗಡಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ವೀರ ಕನ್ನಡಿಗರ ರಕ್ಷಣಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಬರ್ಕತ್ ಅಬಕಾರಿ ಅಧಿಕಾರಿಗಳಲ್ಲಿ ಮನವಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಗೂಳೂರು ರಸ್ತೆ ಬದಿಯಲ್ಲಿರುವ ಹೊಲ–ಗದ್ದೆಗಳು ಮದ್ಯದ ಖಾಲಿ ಬಾಟಲಿಗಳು, ಪೌಚ್‌ಗಳು, ಪ್ಲಾಸ್ಟಿಕ್ ಚೀಲಗಳಿಂದ ತುಂಬಿ ತುಳುಕುತ್ತಿವೆ’ ಎಂದು ಆರೋಪಿಸಿದರು.

ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ, ಕಾಲೊನಿಗಳಲ್ಲಿ, ಗಿರಿಜನ ತಾಂಡಾಗಳಲ್ಲಿ ಗೂಡಂಗಡಿ ಹಾಗೂ ಪಟ್ಟಣದ ಡಾಬಾಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಆದ್ದರಿಂದ ಈ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಅಬಕಾರಿ ಇಲಾಖೆಯವರಿಗೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ಮನವಿ ನೀಡಿದರು. ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿ, ‘ಗ್ರಾಮೀಣ ಭಾಗದಲ್ಲಿ ಗೂಡಂಗಡಿ ಹಾಗೂ ಡಾಬಾಗಳಲ್ಲಿ ಮದ್ಯ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು. 

ವೀರ ಕನ್ನಡಿಗರ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲರೆಡ್ಡಿ, ಉಪಾಧ್ಯಕ್ಷ ಅಕ್ರಂ ಪಾಷಾ, ಗೌರವಾಧ್ಯಕ್ಷ ಪಿ.ಜಿ.ಶಿವಶಂಕರಾಚಾರಿ, ಮಹಿಳಾ ಘಟಕ ನಾಗಮಣಿ, ರಹಿಮಾಭಿ, ಶಂತಮ್ಮ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.