ಬಾಗೇಪಲ್ಲಿ: ಹಸಿವಿನಿಂದ ಬಳಲುವ ಕಷ್ಟದ ಸಮಯದಲ್ಲಿ ಒಪ್ಪತ್ತಿನ ಊಟ ನೀಡಿ, ಉಚಿತ ಅಕ್ಕಿ ಕೊಟ್ಟು ಬಡವರ ಸಂಕಷ್ಟ ನಿವಾರಿಸಿದ್ದು ರಾಜ್ಯದ ಕಾಂಗ್ರೆಸ್ ಸರ್ಕಾರ. ಜನರ ಸಮಸ್ಯೆಗೆ ಕಾಂಗ್ರೆಸ್ ಸದಾ ಕಾಲ ಸ್ಪಂದಿಸುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಪ್ರಯುಕ್ತ ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
'ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ 10 ಸಾವಿರ ಮನೆ, 3 ಸಾವಿರ ನಿವೇಶನಗಳ ಮಂಜೂರಾತಿ ಆದೇಶ ಪತ್ರ, 8 ಸಾವಿರ ಉಚಿತ ಅನಿಲ ಸಂಪರ್ಕ ವಿತರಿಸಲಾಗುವುದು. ಅಲ್ಲದೆ ಗೂಳೂರು ಹೋಬಳಿಯ ನಾರಾಯಣಸ್ವಾಮಿ ಕೋಟೆ (ಭದ್ರಪ್ಪಲ್ಲಿ) ಕ್ರಾಸ್ನಲ್ಲಿ ₹ 18 ಕೋಟಿ ವೆಚ್ಚದ ವಸತಿ ನಿಲಯ, ಚೇಳೂರು ಹೋಬಳಿಯ ಪುಲಿಗಲ್ ಕ್ರಾಸ್ನಲ್ಲಿ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಉದ್ಘಾ ಟಿಸಲಾಗುವುದು ಎಂದು ಅವರು ವಿವರಿಸಿದರು.
'ಕ್ಷೇತ್ರದ ಅಭಿವೃದ್ಧಿ ಸಹಿಸಲಾರದ ಕೆಲವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡುವರು ಎಂದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಬೂರಗಮಡಗು ಲಕ್ಷ್ಮೀನರಸಿಂಹಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ. ನಾಗರಾಜ್, ಎಪಿಎಂಸಿ ಅಧ್ಯಕ್ಷ ಬಿ. ನಾರಾಯಣರೆಡ್ಡಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಕೆಎಂಎಫ್ ನಿರ್ದೇಶಕ ಪ್ರಭಾಕರರೆಡ್ಡಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎ.ನಾಗರಾಜುರೆಡ್ಡಿ, ಉಪಾಧ್ಯಕ್ಷ ಕೆ.ಎನ್.ಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಯರ್ರಕಿಟ್ಟಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ, ಮುಖಂಡರಾದ ಶಿವರಾಮಿರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ಅಶ್ವತ್ಥಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.